ವ್ಯಕ್ತಿಯೊಬ್ಬ ತನ್ನನ್ನು ಕೊಲೆ ಮಾಡಲು ತಾನೇ ಸುಪಾರಿ ಹಂತಕರನ್ನು ನೇಮಿಸಿಕೊಂಡ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ತನ್ನ ಹೆಸರಲ್ಲಿರುವ 50 ಲಕ್ಷ ರೂ.ಗಳ ವಿಮೆಯನ್ನು ತನ್ನ ಕುಟುಂಬ ಪಡೆಯುವುದಕ್ಕೆ ಸಹಾಯವಾಗಲೆಂದು ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಮ್ಯಾಂಗ್ರೋಪ್ ಗ್ರಾಮದ ನಿವಾಸಿ ಬಲ್ವೀರ್ ತನ್ನನ್ನು ಕೊಲ್ಲಲು ತಾನೇ ಸುಪಾರಿ ಹಂತಕರನ್ನು ನೇಮಕ ಮಾಡಿಕೊಂಡಿದ್ದ.
ಅದರಂತೆ ಕಳೆದ ವಾರ ಆತನ ಹತ್ಯೆ ನಡೆದಿದ್ದು ಗ್ರಾಮದಲ್ಲಿ ಅವರ ಶವ ಕೈಕಾಲುಗಳನ್ನು ತಂತಿಯಿಂದ ಕಟ್ಟಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಜತೆಗೆ ಆತನ ಕತ್ತು ಹಿಸುಕಿ ಕೊಂದ ಕುರುಹುಗಳೂ ಕಂಡುಬಂದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಬಲ್ವೀರ್ ತನಗೆ ತಾನೇ ಸುಪಾರಿ ಹಂತಕರನ್ನು ನೇಮಕ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದು ಆತನನ್ನು ಕೊಲ್ಲಲು ಉತ್ತರ ಪ್ರದೇಶದ ವ್ಯಕ್ತಿ ಸುನೀಲ್ ಯಾದವ್ ಮತ್ತು ಅವರ ಸಹಚರ ರಾಜ್ ವೀರ್ ನೇಮಕವಾಗಿತ್ತು.ಅದಕ್ಕಾಗಿ ಬಲ್ವೀರ್ ಅವರಿಗೆ 80,000 ರೂ. ಸುಪಾರಿ ನೀಡಿದ್ದನೆಂದು ಪೋಲೀಸರು ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ ಬಲ್ವೀರ್ ತಾನೆಲ್ಲಿ ಕೊಲೆಯಾಗಬೇಕೆಂದು ಯೋಜಿಸಿದ್ದನೋ ಅಲ್ಲಿಗೆ ಹಂತಕ ಸುನೀಲ್ ನನ್ನು ತಾನೇ ಸ್ವತಃಅ ಕರೆದೊಯ್ದು ತೋರಿಸಿದ್ದ ಎಂಬ ಆಘಾತಕಾರಿ ಸುದ್ದಿ ಬಹಿರಂಗವಾಗಿದೆ.
ಬಲ್ವೀರ್ ಗ್ರಾಮಸ್ಥರಿಂದ ಸುಮಾರು 20 ಲಕ್ಷ ರೂ.ಗಳನ್ನು ಸಾಲ ಪಡೆದಿದ್ದ. ಅದಕ್ಕಾಗಿ ಭಾರಿ ಬಡ್ಡಿ ತೆರಬೇಕಾಗಿದೆ. ಆದರೆ ಹೇಗಾದರೂ ಸಾಲ ಮರುಪಾವತಿಸಲು ಸಾಧ್ಯವಾಗದೆ ಹೋದಾಗ ಬಲ್ವೀರ್ ಗೆ 50 ಲಕ್ಷ ರೂ.ಗಳ ವೈಯಕ್ತಿಕ ಅಪಘಾತ ವಿಮೆಯನ್ನು ತೆಗೆದುಕೊಳ್ಳುವ ಆಲೋಚನೆ ಬಂದಿದೆ. ಅದರಂತೆ ತಮ್ಮ ಕುಟುಂಬ ಆ ವಿಮಾ ಮೊತ್ತವನ್ನು ಪಡೆಯಲು 8,43,200 ರೂ. ಪ್ರೀಮಿಯಂ ಸಹ ಪಾವತಿಸಿದ್ದಾರೆ. ಮುಂದೆ ತನ್ನ ಕುಟುಂಬ ಸಾಲಗಾರರ ಕೋಪಕ್ಕೆ ತುತ್ತಾಗಬಾರದೆಂದು ಕಾರಣಕ್ಕೆ ಜತೆಗೆ ಸಾಲ ತೀರಿದ ನಂತರ ಉಳಿವ ವಿಮಾ ಮೊತ್ತದ ಹಣದಲ್ಲಿ ಕುಟುಂಬವು ಸಂತೋಷದಾಯಕ ಜೀವನ ನಡೆಸಬಹುದೆಂಬ ಕಾರಣಕ್ಕೆ ಬಲ್ವೀರ್ ತನ್ನನ್ನೇ ಕೊಲ್ಲುವಂತೆ ತಮಗೆ ತಾವು ಸುಪಾರಿ ಹಂತಕರ ನೇಮಕ ಮಾಡಿಕೊಂಡಿದ್ದಾನೆ.
ಇದೀಗ ಪೋಲೀಸರು ಆರೋಪಿಯನ್ನು ಬಂಧಿಸಿದ್ದರೂ ಸಹ ಬಲ್ವೀರ್ ಕುಟುಂಬ ಪಿತೂರಿ ಅಥವಾ ವಿಮಾ ಪಾಲಿಸಿಯ ಕುರಿತಂತೆ ಯಾವುದೇ ತಂತ್ರಗಾರಿಕೆಯನ್ನು ನಿರಾಕರಿಸಿದೆ.
Advertisement