ಭೋಪಾಲ್: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಮಕ್ಕಳನ್ನು ರಕ್ಷಿಸಿದ ಸಾಹಸಿ ತಂದೆ ಕೊನೆಗೆ ಕಲ್ಲಬಂಡೆಗಳ ನಡುವೆ ಸಿಕ್ಕಿ ದುರಂತ ಅಂತ್ಯ ಕಂಡಿರುವ ಘಟನೆ ಕೋಲಾರ್ ದಲ್ಲಿ ನಡೆದಿದೆ.
ಶಾಲಾ ಬಸ್ ಚಾಲಕನಾಗಿರುವ 35 ವರ್ಷದ ರಿಜ್ವಾನ್ ಖಾನ್ ತಮ್ಮ ಕುಟುಂಬ ಸಂಬಂಧಿಕರೊಂದಿಗೆ ಮಧ್ಯಪ್ರದೇಶದ ಭೋಪಾಲ್ ನ ಕೋಲರ್ ನ ಬಾಬಾ ಜಿಹ್ರಿಗೆ ಪ್ರವಾಸಕ್ಕೆ ತೆರಳಿದ್ದರು.
ಹೊಳೆಯಲ್ಲಿ ಮಕ್ಕಳೊಂದಿಗೆ ಈಜುತ್ತಿದ್ದಾಗ ದಿಢೀರ್ ಅಂತ ನೀರು ಹರಿದು ಬಂದಿದೆ. ಈ ವೇಳೆ ರಿಜ್ವಾನ್ ಖಾನ್ ಇಬ್ಬರು ಮಕ್ಕಳನ್ನು ಮೊದಲಿಗೆ ಕಾಪಾಡಿದ್ದಾರೆ. ನಂತರ ಇನ್ನೊಂದು ಮಗು ಕೊಚ್ಚಿಕೊಂಡು ಹೋಗುತ್ತಿದ್ದಾಗ ಅದನ್ನು ಕಾಪಾಡಿ ತಮ್ಮ ಸಂಬಂಧಿಕರ ಕೈ ನೀಡಿದ್ದಾರೆ.
ನಂತರ ನೀರಿನ ಸೆಳೆತ ಜೋರಾಗಿದ್ದರಿಂದ ರಿಜ್ವಾನ್ ಖಾನ್ ಕೈಗಳು ಸೋತಿದ್ದವು. ಅಲ್ಲದೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ರಿಜ್ವಾನ್ ಕಾಲು ಬಂಡೆಗಳ ಮಧ್ಯೆ ಸಿಕ್ಕಿಕೊಂಡಿದೆ. ಹೀಗಾಗಿ ತಾವು ಈಜಿ ಮೇಲೆ ಬರಲು ಸಾಧ್ಯವಾಗದೇ ಜಲಸಮಾಧಿಯಾಗಿದ್ದಾರೆ.
ನಂತರ ಪೊಲೀಸರು ಸ್ಥಳೀಯರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ರಿಜ್ವಾನ್ ಅವರ ಮೃತದೇಹ 7 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಈ ಸಂಬಂಧ ಕೋಲಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement