ಹೈದರಾಬಾದ್: ಸಾಫ್ಟ್ ವೇರ್ ದೈತ್ಯ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರ ತಂದೆ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್. ಯುಗಂಧರ್(82) ಅವರು ಶುಕ್ರವಾರ ಹೈದರಾಬಾದ್ನಲ್ಲಿ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯುಗಂಧರ್ ಅವರು ಇಂದು ಮಧ್ಯಾಹ್ನ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಯುಗಂಧರ್ ಅವರ ಪತ್ನಿ ಈ ಮೊದಲೇ ನಿಧನರಾಗಿದ್ದು, ಸತ್ಯ ನಾಡೆಲ್ಲ ಅವರು ಏಕೈಕ ಪುತ್ರ.
1962ನೇ ಬ್ಯಾಚಿನ ಐಎಎಸ್ ಅಧಿಕಾರಿಯಾದ ಯುಗಂಧರ್ ಅವರು ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಪ್ರಧಾನಮಂತ್ರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
ಮುಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಆಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ನ ನಿರ್ದೇಶಕರಾಗಿಯೂ ಯುಗಂಧರ್ ಅವರು ಸೇವೆ ಸಲ್ಲಿಸಿದ್ದರು.
2004-09ರ ಅವಧಿಯಲ್ಲಿ ಯೋಜನಾ ಆಯೋಗದ ಸದಸ್ಯರಾಗಿ ಮತ್ತು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಯುಗಂಧರ್ ಕಾರ್ಯನಿರ್ವಹಿಸಿದ್ದರು.
ಯುಗಂಧರ್ ಅವರ ಸಾವಿಗೆ ಹಲವು ಐಎಎಸ್ ಅಧಿಕಾರಿಗಳು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಅವರು ಯುಗಾಂಧರ್ ಅವರ ಸರಳತೆ, ಪ್ರಾಮಾಣಿಕತೆ ವೃತ್ತಬದ್ಧತೆಯನ್ನು ಸ್ಮರಿಸಿಕೊಂಡಿದ್ದಾರೆ.
Advertisement