ಎನ್ಸಿಪಿ ತೊರೆದು ಬಿಜೆಪಿ ಸೇರಿದ ಶಿವಾಜಿ ವಂಶಸ್ಥ ಉದಯನ್ರಾಜ್
ಮಹಾರಾಷ್ಟ್ರದಲ್ಲಿ ಕೇಸರಿ ಪಕ್ಷಕ್ಕೆ ಮತ್ತಷ್ಟು ಬಲ, ಅಮಿತ್ ಶಾ ಸಮ್ಮುಖದಲ್ಲಿ ಸೇರ್ಪಡೆ
ನವದೆಹಲಿ: ಮಹಾರಾಷ್ಟ್ರದಲ್ಲಿ ಕೇಸರಿ ಪಡೆಯ ಬಲ ಮತ್ತಷ್ಟು ಹೆಚ್ಚಿದ್ದು, ಶಿವಾಜಿ ವಂಶಸ್ಥ ಉದಯನ್ರಾಜ್ ಭೋಸ್ಲೆ ಎನ್ ಸಿಪಿ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸತಾರ ಪ್ರದೇಶದ ಎನ್ಸಿಪಿಯ ಪ್ರಮುಖ ನಾಯಕ ಹಾಗೂ ಶಿವಾಜಿ ಮಹಾರಾಜರ ನೇರ ವಂಶಸ್ಥ ಉದಯನ್ರಾಜ್ ಭೋಸಲೆ ಶನಿವಾರ ಇಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದು, ಇದರೊಂದಿಗೆ ವಿಧಾನಸಭಾ ಚುನಾವಣೆಯ ಹೊಸ್ತಿನಲ್ಲಿರುವ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವ ಮತ್ತು ಉತ್ತಮ ಕೆಲಸಗಳಿಂದ ಪ್ರೇರಣೆ ಪಡೆದು ನಾನು ಬಿಜೆಪಿ ಸೇರ್ಪಡೆಗೊಳ್ಳಲು ನಿರ್ಧರಿಸಿದೆ ಎಂದು ಭೋಸಲೆ ಸುದ್ದಿಗಾರರಿಗೆ ತಿಳಿಸಿದರು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೆ ವಿಧಿಯನ್ನು ರದ್ದುಪಡಿಸಿದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಕ್ರಮವನ್ನು ಕೂಡ ಅವರ ಇದೇ ವೇಳೆ ಶ್ಲಾಘಿಸಿದರು.