ನವದೆಹಲಿ:"ಅಮಿತ್ ಷಾ ಹಿಂದಿ ಭಾಷೆಯ ಬಗ್ಗೆ ಅಭಿಮಾನದಿಂದ ಮಾತನಾಡಿದ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಒಂದೊಮ್ಮೆ ನವದೆಹಲಿಯಲ್ಲೇ ಕನ್ನಡ ಭಾಷಾ ಕಾರ್ಯಕ್ರಮ ನಡೆದು ನಾನು ಅದರಲ್ಲಿ ಭಾಗಿಯಾಗಿದ್ದರೆ ನಾನು ಕನ್ನಡದ ಬಗ್ಗೆ ಸಹ ಇಷ್ಟೇ ಅಭಿಮಾನದಿಂದ ಮಾತನಾಡುತ್ತಿದ್ದೆ. ಕನ್ನಡ ಭಾಷೆಗೆ ಹೆಚ್ಚು ಉತ್ತೇಜನ ನೀಡಬೇಕೆಂದು ಮನವಿ ಮಾಡುತ್ತಿದ್ದೆ. ಏಕೆಂದರೆ ಅದು ಶ್ರೇಷ್ಠವಾದ ಭಾಷೆಯಾಗಿದೆ" ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ.
ಹಿಂದಿ ದೇಶವನ್ನು "ಐಕ್ಯತೆಯತ್ತ" ಕೊಂಡೊಯ್ಯುವ ಭಾಷೆ. ಹಾಗೆಂದ ಮಾತ್ರಕ್ಕೆ ಇದು ಇತರೆ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುವುದೆಂದು ಯಾರೂ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಹೇಳಿದ್ದಾರೆ. ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆ ಬೆಂಬಲಿಸಿರುವ ಗೌಡ ಸೋಮವಾರ ಸುದ್ದಿಸಂಸ್ಥೆ ಎಎನ್ಐಯೊಂದಿಗೆನೊಂದಿಗೆ ನೀಡಿದ ಸಂದರ್ಶನದಲ್ಲಿ ಮೇಲಿನ ಮಾತುಗಳನ್ನು ಹೇಳಿದ್ದಾರೆ.
"ಹಿಂದಿ ದೇಶವನ್ನು ಐಕ್ಯತೆಯತ್ತ ಕೊಂಡೊಯ್ಯುವ ಭಾಷೆ. ಆದರೆ ಇದು ದೇಶದ ಇತರ ಪ್ರಾದೇಶಿಕ ಭಾಷೆಗಳ ಮೇಲೆ ಸವಾರಿ ಮಾಡುತ್ತದೆ ಎನ್ನಲಾಗುವುದಿಲ್ಲ. ಬಹು ಹಿಂದಿನಿಂದಲೂ ನಾವು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಳ್ಳುತ್ತಾ ಬಂದಿದ್ದೇವೆ. ಪ್ರಧಾನ ಮಂತ್ರಿ ಕೂಡ ಕಳೆದ ಅಧಿವೇಶದ ಸಮಯದಲ್ಲಿ ಸದನದಲ್ಲಿ ಮಾತನಾಡಿ ತಾನು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಸಮಾನ ಗೌರವ ನೀಡುತ್ತೇನೆ ಎಂದಿದ್ದಾರೆ. " ಸದಾನಂದಗೌಡ ಹೇಳಿದ್ದಾರೆ.
ಹಿಂದಿ ಭಾರತವನ್ನು ಸಾಂಸ್ಕೃತಿಕವಾಗಿ ಏಕೀಕರಿಸುವ ಭಾಷೆ ಹಾಗಾಗಿ ಇದನ್ನು ರಾಷ್ಟ್ರೀಯ ಭಾಷೆಯಾಗಿ ಮಾನ್ಯ ಮಾಡಬೇಕೆಂದು ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡಿದ ದಿನಗಳ ನಂತರ ಗೌಡ ಹೇಳಿಕೆ ಹೊರಬಿದ್ದಿದೆ.
ಷಾ ಅವರ ಹೇಳಿಕೆಗೆ ಹಲವು ವಿರೋಧ ಪಕ್ಷದ ನಾಯಕರು ಟೀಕಿಸಿದ್ದು ಅವರ ಮನವಿಯನ್ನು ಮರುಪರಿಶೀಲಿಸಲಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಹಿಂದಿ ಹೇರಿಕೆ ರಾಷ್ಟ್ರೀಯ ಏಕತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಷಾ ವೈವಿಧ್ಯತೆಯಲ್ಲಿ ಏಕತೆ ಭಾರತದ ಪ್ರಮುಖ ಲಕ್ಷಣವಾಗಿದ್ದರೂ ಸಾಂಸ್ಕೃತಿಕವಾಗಿ ಏಕೀಕರಿಸುವ ಅಂಶವಾಗಿ ಒಂದೇ ಭಾಷೆಯ ಅಗತ್ಯವಿದೆಎಂದು ಹೇಳಿದ್ದರು. ಷಾ ಅವರು ತಮ್ಮ ಭಾಷಣದಲ್ಲಿ, ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸಲು ಮನವಿ ಮಾಡಿದರು, ಆದರೆ ಹಿಂದಿಯ ಬೆಳವಣಿಗೆಯು ಬೇರೆ ಯಾವುದೇ ಭಾಷೆಯ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು ಮತ್ತು ಹಿಂದಿ ಸಹಬಾಳ್ವೆಯ ಭಾಷೆ ಎಂದು ಹೇಳಿದರು.
Advertisement