ಶಹಜಾನ್ಪುರ್: ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಶಹಜಾನ್ಪುರ್ ಕಾನೂನು ವಿದ್ಯಾರ್ಥಿನಿ, ಎಸ್ಐಟಿ ಆರೋಪಿಯನ್ನು ಬಂಧಿಸಲು ವಿಳಂಬ ಮಾಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ನಾನು ಸಾಯುವುದಕ್ಕಾಗಿ ಕಾಯುತ್ತಿದೆಯೇ? ನಾನು ಸತ್ತಮೇಲೆಯೇ ಮಾಜಿ ಕೇಂದ್ರ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೀರಾ? ಸಂತ್ರಸ್ತ ವಿದ್ಯಾರ್ಥಿನಿ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ನನ್ನ ಹೇಳಿಕೆ ದಾಖಲಿಸಿಕೊಂಡು 15 ದಿನಗಳಾಗಿವೆ ಮತ್ತು ಅಗತ್ಯ ಸಾಕ್ಷ್ಯಗಳನ್ನು ನೀಡಲಾಗಿದೆ. ಆದರೂ ಆರೋಪಿಯ ವಿರುದ್ಧ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಎಸ್ಐಟಿ ಬಿಜೆಪಿ ಮುಖಂಡನನ್ನು ರಕ್ಷಿಸುತ್ತಿದೆ ಎಂದು ಸ್ನಾತಕೋತ್ತರ ಕಾನೂನು ವಿದ್ಯಾರ್ಥಿನಿ ದೂರಿದ್ದಾರೆ.
ಉತ್ತರ ಸರ್ಕಾರ ನನ್ನ ಸಾವು ಬಯಸುತ್ತಿರಬಹುದು. ನಾನು ಆತ್ಮಹತ್ಯೆ ಮಾಡಿಕೊಂಡ ನಂತರವೇ ಅಧಿಕಾರಿಗಳು ನನ್ನನ್ನು ನಂಬುತ್ತಾರೆಯೇ? ಎಂದು ಸಂತ್ರಸ್ತೆ ಪ್ರಶ್ನಿಸಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಪ್ರಕಾರ, ಚಿನ್ಮಯಾನಂದ್ ಅವರ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಗಳನ್ನು ನೀಡಲಾಗಿದೆ. ಆದರೂ ಬಿಜೆಪಿ ಮುಖಂಡನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.
ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಮತ್ತು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
Advertisement