ಲಖನೌ: ಕಾಂಗ್ರೆಸ್ ವಿರುದ್ಧ ಬುಧವಾರ ಮತ್ತೆ ವಾಗ್ದಾಳಿ ನಡೆಸಿರುವ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಅವರು ದೇಶದಲ್ಲಿ ಕೋಮುವಾದಿಗಳು ಮತ್ತಷ್ಟು ಬಲಿಷ್ಠವಾಗುತ್ತಿರುವುದಕ್ಕೇ ಕಾಂಗ್ರೆಸ್ ನ ದ್ವಿಮುಖ ನೀತಿಯೇ ಕಾರಣ ಎಂದು ಆರೋಪಿಸಿದ್ದಾರೆ.
ಕೋಮುವಾದಿಗಳ ಮತ್ತಷ್ಟು ಬಲಿಷ್ಠರಾಗುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದಿರುವ ಮಾಯಾವತಿ, ಕಾಂಗ್ರೆಸ್ ಕೋಮುವಾದಿ ಶಕ್ತಿಗಳನ್ನು ದುರ್ಬಳಗೊಳಿಸುವ ಬದಲು ಪ್ರತಿಪಕ್ಷಗಳನ್ನು ದುರ್ಬಲಗೊಳಿಸುವುದರಲ್ಲಿ ನಿರತವಾಗಿದೆ. ಜನ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜಸ್ಥಾನದ ಎಲ್ಲಾ ಆರು ಬಿಎಸ್ಪಿ ಶಾಸಕರೂ ಆಡಳಿತರೂಢ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಬಗ್ಗೆ ನಿನ್ನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಮಾಯಾವತಿ, ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಟೀಕಿಸಿದ್ದರು.
ಕಾಂಗ್ರೆಸ್, ಬಿಎಸ್ಪಿ ಶಾಸಕರನ್ನು ಖರೀದಿಸುವ ಮೂಲಕ ನಂಬಿಕೆಗೆ ಅರ್ಹವಲ್ಲದ ಪಕ್ಷ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್ಪಿ ತನ್ನ ಬೇಷರತ್ತಾದ ಬೆಂಬಲವನ್ನು ನೀಡಿದ್ದರೂ ಸಹ ಇದು ನಂಬಿಕೆ ದ್ರೋಹ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement