ಇಂಡಿಯನ್ ಸಿಮೆಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಇಂಡಿಯಾ (ಬಿಸಿಸಿಐ) ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್, ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಸುಧಾಮೂರ್ತಿ ಸೇರಿ 24 ಮಂದಿಯನ್ನು ಆಂಧ್ರಪ್ರದೇಶ ಸರ್ಕಾರವು ಪ್ರತಿಷ್ಠಿತ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಟ್ರಸ್ಟ್ ಬೋರ್ಡ್ಗೆ ನಾಮನಿರ್ದೇಶನ ಮಾಡಿದೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಮಂಗಳವಾರ ಈ ಸಮ್ಬಂಧ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಟಿಟಿಡಿಗೆ ರಾಜೀನಾಮೆ ಸಲ್ಲಿಸಿದ್ದ ಸುಧಾಮೂರ್ತಿ ಈಗ ಮತ್ತೊಮ್ಮೆ ಸದಸ್ಯತ್ವ ಪಡೆದಿದ್ದಾರೆ.
ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ವೆಂಕಟೇಶ್ವರ ದೇವಾಲಯ ಆಡಳಿತ ನಿರ್ವಹಣೆಗಾಗಿ ಜಗನ್ ತಮ್ಮ ಆಪ್ತರನ್ನೇ ನೇಮಕ ಮಾಡುತ್ತಿದ್ದಾರೆಂದು ಆರೋಪ ಕೇಳಿಬಂದಿತ್ತು. ಆದರೆ ಈಗ ಜಗನ್ ಟಿಟಿಡಿ ಮಂಡಳಿ ಪುನರ್ರಚನೆ ಮಾಡಿದ್ದು ಸದಸ್ಯರ ಸಂಖ್ಯೆಯನ್ನು 15ರಿಂದ 25ಕ್ಕೆ ಹೆಚ್ಚಿಸಿದ್ದಾರೆ.
ಮಂಡಳಿಯ ಸದಸ್ಯರಾದವರಲ್ಲಿ ರಾಜ್ಯದಿಂದ ಸುಧಾಮೂರ್ತಿಯವರಲ್ಲದೆ ಸಂಪತ್ ರವಿ ನಾರಾಯಣ, ರಮೇಶ್ ಶೆಟ್ಟಿ ಅವರಿದ್ದಾರೆ. ಹೊಸದಾಗಿ ರಚಿಸಲಾದ ಮಂಡಳಿಯಲ್ಲಿ ಆಂಧ್ರಪ್ರದೇಶದ ಎಂಟು ಮಂದಿ, ತೆಲಂಗಾಣದಿಂದ ಏಳು ಮಂದಿ, ತಮಿಳುನಾಡಿನ ನಾಲ್ವರು, ಕರ್ನಾಟಕದಿಂದ ಮೂವರು ಮತ್ತು ದೆಹಲಿ ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರು ಸೇರಿದ್ದಾರೆ ಮಂಡಳಿಯ ಅಧ್ಯಕ್ಷರಾಗಿ ವೈ.ವಿ.ಸುಬ್ಬಾ ರೆಡ್ಡಿ ನೇಮಕವಾಗಿದ್ದಾರೆ.
Advertisement