ನವದೆಹಲಿ: ಜಾರ್ಖಂಡ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಅಜೋಯ್ ಕುಮಾರ್ ಇಂದು ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಯಾದರು. ಉಪಮುಖ್ಯಮಂತ್ರಿ ಮನೀಶ್ ಸಿಸೊಡಿಯಾ ಸಮ್ಮುಖದಲ್ಲಿ ಅಜೋಯ್ ಕುಮಾರ್ ಎಎಪಿ ಪಕ್ಷ ಸೇರಿಕೊಂಡರು.
ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಆಮ್ ಆದ್ಮಿ ಪಕ್ಷ ಪಾತ್ರ ನಿರ್ವಹಿಸುತ್ತಿದೆ. ನಮ್ಮ ಅಭಿವೃದ್ಧಿ ಅಂದೋಲನಕ್ಕೆ ಇದೀಗ ಅಜೋಯ್ ಕುಮಾರ್ ಸೇರ್ಪಡೆಯಾಗಿದ್ದಾರೆ ಎಂದು ಮನೀಶ್ ಸಿಸೋಡಿಯಾ ತಿಳಿಸಿದರು.
ಐಪಿಎಸ್ ಅಧಿಕಾರಿ ಹಾಗೂ ಸಂಸತ್ ಸದಸ್ಯರಾಗಿ ದೇಶಕ್ಕೆ ಸೇವೆ ಸಲ್ಲಿಸಿರುವ ಅಜೋಯ್ ಕುಮಾರ್ ಬಗ್ಗೆ ಆಂದೋಲನದಿಂದಲೂ ಪರಸ್ಪರ ಗೊತ್ತಿದೆ. ನಮ್ಮೊಂದಿಗೆ ಎಲ್ಲಾ ರಾಜ್ಯಗಳಲ್ಲಿಯೂ ಅವರು ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಎಎಪಿಗೆ ಸೇರ್ಪಡೆಯಾದ ಬಳಿಕ ಅಜೋಯ್ ಕುಮಾರ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದಾರೆ.
ಎಎಪಿ ಕುಟುಂಬಕ್ಕೆ ಕುಮಾರ್ ಅವರನ್ನು ಸ್ವಾಗತಿಸುತ್ತೇನೆ. ಅವರ ಸೇರ್ಪಡೆಯೊಂದಿಗೆ ಆಮ್ ಆದ್ಮಿ ಕುಟುಂಬ ಖಂಡಿತವಾಗಿ ಸದೃಢಗೊಳ್ಳಲಿದೆ.ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣದ ಹೋರಾಟದಲ್ಲಿ ಅವರು ನೊಮ್ಮೊಂದಿಗೆ ಸೇರಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಜಾರ್ಖಂಡ್ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷ ತೊರೆದು ಎಎಪಿಗೆ ಸೇರ್ಪಡೆಯಾಗಿದ್ದೇನೆ. ತಮ್ಮ ಪಾತ್ರದ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದು ಅಜೋಯ್ ಕುಮಾರ್ ತಿಳಿಸಿದ್ದಾರೆ.
Advertisement