ನವದೆಹಲಿ: ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯಾ ಕೆ. ತಹಿಲ್ರಾಮಣಿ ಅವರು ಸಲ್ಲಿಸಿದ್ದ ರಾಜಿನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕರಿಸಿದ್ದಾರೆ.
ಮೇಘಾಲಯ ಹೈಕೋರ್ಟ್ಗೆ ವರ್ಗಾವಣೆ ಆಗಿದ್ದ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಜಯಾ ಕೆ. ತಹಿಲ್ರಾಮಣಿ ಈ ಹಿಂದೆ ತಮ್ಮ ಸ್ಥಾನಕ್ಕೆ ಸೆಪ್ಟೆಂಬರ್ 6 ರಂದು ರಾಜಿನಾಮೆ ನೀಡಿದ್ದರು. ಇದಕ್ಕೂ ಕಳೆದ ವರ್ಷ ಆಗಸ್ಟ್ 8ರಂದು ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ತಹಿಲ್ರಾಮಣಿ ಬಡ್ತಿ ಪಡೆದಿದ್ದರು. ಆಗಸ್ಟ್ 28ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವಿಜಯಾ ಕೆ. ತಹಿಲ್ರಾಮಣಿ ಅವರನ್ನು ಮೇಘಾಲಯ ಹೈಕೋರ್ಟ್ ಗೆ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರನ್ನು ಹಂಗಾಮಿ ನ್ಯಾಯಾಧೀಶರಾಗಿ ನೇಮಕ ಮಾಡಿತ್ತು.
ಇನ್ನು ವಿಜಯಾ ಕೆ. ತಹಿಲ್ರಾಮಣಿ ತಮ್ಮ ವರ್ಗಾವಣೆ ರದ್ದುಪಡಿಸಲು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ತಿರಸ್ಕರಿಸಿದ ಬಳಿಕ ತಹಿಲ್ರಾಮಣಿ ಈ ರಾಜಿನಾಮೆ ನಿರ್ಧಾರ ಕೈಗೊಂಡಿದ್ದರು. ವರ್ಗಾವಣೆಯನ್ನು ವಿರೋಧಿಸಿ ರಾಜೀನಾಮೆ ನೀಡುತ್ತಿರುವುದಾಗಿ ತಹಿಲ್ರಾಮಣಿ ಅವರು ಇತರ ನ್ಯಾಯಮೂರ್ತಿಗಳಿಗೆ ತಿಳಿಸಿದ್ದರು.
ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಸಲ್ಲಿಸಿದ್ದಾರೆ. ಅದರ ಇನ್ನೊಂದು ಪ್ರತಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೂ ಕಳುಹಿಸಿದ್ದಾರೆ
Advertisement