ಬೆಂಗಳೂರು: ವಿಶ್ವವೇ 370 ವಿಧಿ ನಿಷ್ಕ್ರಿಯಗೊಳಿಸಿದ ನಿರ್ಧಾರದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ. ಪಾಕಿಸ್ತಾನ ಈ ವಿಚಾರವಾಗಿ ಈಗ ಜಗತ್ತಿನ ಮುಂದೆ ಏಕಾಂಗಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
ನಗರದ ಅರಮನೆ ಮೈದಾನದಲ್ಲಿ ನಡೆದ ರಾಷ್ಟ್ರೀಯ ಏಕತಾ ಅಭಿಯಾನ 'ಒಂದು ದೇಶ ಒಂದು ಸಂವಿಧಾನ 370 ನೆ ವಿಧಿ ನಿಷ್ಕ್ರಿಯೆಗೊಳಿಸಿದರ ಬಗ್ಗೆ ಜನ ಜಾಗರಣ ಸಭೆ ಉದ್ದೇಶಿಸಿ ಮಾತನಾಡುತ್ತಾ ಅವರು, ಈಗ ದೇಶ ಬದಲಾಗಿದೆ. ವಿಶ್ವದಲ್ಲೇ ಭಾರತ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಮ್ಮು ಕಾಶ್ಮೀರದ ಸಂಬಂಧ ಈ ನಿರ್ಧಾರ ದೂರಗಾಮಿಯಾಗಲಿದೆ ಎಂದು ಅವರು ವಿವರಿಸಿದರು.
370 ಎನ್ನುವುದು ಕಾಶ್ಮೀರದ ಜೊತೆಗೆ ಅಂಟಿಕೊಂಡಿತ್ತು.ಈಗ ಅದನ್ನು ನಮ್ಮ ಪ್ರಧಾನಿಗಳು ಬಿಡಿಸಿದ್ದಾರೆ. 370ನೇ ವಿಧಿ ಬಗ್ಗೆ ತಪ್ಪು ಕಲ್ಪನೆಗಳನ್ನು ಹಬ್ಬಿಸಲಾಗಿತ್ತು. ಇದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಡುತ್ತೆ ಎನ್ನುವ ಸುಳ್ಳನ್ನು ಹಬ್ಬಿಸಲಾಗಿತ್ತು. ಇದೊಂದು ಐತಿಹಾಸಿಕ ಸುಳ್ಳು ತಾತ್ಕಾಲಿಕವಾಗಿ ಮಾತ್ರ ವಿಶೇಷ ಸ್ಥಾನಮಾನ ಕಾಶ್ಮೀರಕ್ಕೆ ಕೊಡಲಾಗಿತ್ತು. ಈ ಸ್ಥಾನಮಾನವನ್ನು ಬದಲಿಸಬಹುದಾಗಿತ್ತು. ಆದರೆ ಇದುವರೆಗೆ ಆ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಿರಲಿಲ್ಲ ಎಂದು ಅವರು ಆರೋಪಿಸಿದರು.
370 ವಿಧಿ ಭಾರತದ ಸಂವಿಧಾನದ ವಿರುದ್ಧವಾಗಿತ್ತು. ಇದರಿಂದ ನಮ್ಮ ನೆಲದ 104 ಕಾನೂನುಗಳು ಜಮ್ಮು ಕಾಶ್ಮೀರ ದಲ್ಲಿ ಅನ್ವಯವಾಗುತ್ತಿರಲಿಲ್ಲ. ಈಗ ವಿಧಿ ರದ್ದತಿಯಾದ ಬಳಿಕ ಎಲ್ಲ ಕಾನೂನು ಅನ್ವಯವಾಗಲಿದೆ. ಯಾರೂ ಬೇಕದಾರೂ ಚುನಾವಣೆಗೆ ನಿಲ್ಲಬಹುದಾಗಿದೆ ಎಂದು ತಿಳಿಸಿದರು.
ನಿಮ್ಮ ಮತದಿಂದ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಸದಾನಂದ ಗೌಡರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದಿರಿ. ಅವರನ್ನು ನೀವು ಗೆಲ್ಲಿಸಿಕೊಟ್ಟ ಕಾರಣ ಅವರಿಗೆ ಸಂಸತ್ತಿನಲ್ಲಿ 370 ವಿಧಿ ವಿರುದ್ಧ ಮತ ಹಾಕಲು ಸಾಧ್ಯವಾಯಿತು ಎಂದು ಇದೇ ವೇಳೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಪಾಕಿಸ್ತಾನ ವಶದಲ್ಲಿರುವ ಭಾರತದ ಭೂಭಾಗವೂ ಸಹ ಭಾರತದ ವಶವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಸಭೆ ಉದ್ದೇಶಿಸಿ ಮಾತನಾಡಿದ ಅವರು, ನುಡಿದಂತೆ ನಡೆದಿದ್ದು ಎರಡೇ ಹೆಸರು. ಒಂದು ಮೋದಿ, ಇನ್ನೊಂದು ಅಮಿತ್ ಶಾ. ನೆಹರು ತೀರ್ಮಾನಕ್ಕೆ ದೇಶದಲ್ಲಿ ಟೀಕೆ ವ್ಯಕ್ತವಾಗುತ್ತದೆ ಎನ್ನುವುದನ್ನು ತಿಳಿದು ಶ್ಯಾಮ್ ಪ್ರಕಾಶ್ ಮುಖರ್ಜಿ ಸಂಪುಟದಿಂದ ಹೊರ ಬಂದಿದ್ದರು. ಅಂದಿನಿಂದ ಹೋರಾಟ ನಡೆಯುತ್ತಲೇ ಇತ್ತು ಎಂದು ನಳಿನ್ ಕುಮಾರ್ ಹೇಳಿದರು.
ಸಂಪೂರ್ಣ ಬಹುಮತ ಬಂದ ಕಾರಣ 370 ವಿಧಿಯನ್ನು ತೆಗೆದುಹಾಕಲು ಸಾಧ್ಯವಾಗಿದೆ. ಕಾಶ್ಮೀರ ಶಾರದೆಯ ನಾಡು, ಪಂಡಿತರ ಬೀಡು. ಆದರೆ ಅದು ಭಯೋತ್ಪಾದಕರ ನಾಡಾಗಿತ್ತು. ಯಾರು ರಾಷ್ಟ್ರ ಭಕ್ತರಿದ್ದಾರೋ ಅವರು ಈ ನಿರ್ಧಾರವನ್ನು ಸ್ವಾಗತಿಸುತ್ತಾದರೆ, ಯಾರು ರಾಷ್ಟ್ರ ವಿರೋಧಿಗಳಿದ್ದಾರೋ ಅವರೆಲ್ಲಾ ವಿರೋಧಿಸಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಸದಾನಂದ ಗೌಡ, ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕ ಅರವಿಂದ ಲಿಂಬಾವಳಿ, ರವಿ ಕುಮಾರ್ ಭಾಗಿಯಾಗಿದ್ದರು.
Advertisement