ಬಾಲಕೋಟ್'ನಲ್ಲಿ ಮತ್ತೆ ಉಗ್ರರು ಸಕ್ರಿಯ, ಹೆಚ್ಚು ತೀಕ್ಷ್ಣ ದಾಳಿಯ ಕ್ರಮಕ್ಕೆ ಸಿದ್ಧ: ಪಾಕಿಸ್ತಾನಕ್ಕೆ ಸೇನೆ ಎಚ್ಚರಿಕೆ

ಜಮ್ಮು ಮತ್ತು ಕಾಶ್ಮೀರದ ಬಾಲಕೋಟ್'ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯರಾಗಿದ್ದು, ಮತ್ತೊಂದು ವಾಯುದಾಳಿಯಲ್ಲ ಅದಕ್ಕೂ ಮೀರಿದ ಕ್ರಮಕೈಗೊಳ್ಳುತ್ತೇವೆಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೋಮವಾರ ಎಚ್ಚರಿಸಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಾಲಕೋಟ್'ನಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯರಾಗಿದ್ದು, ಮತ್ತೊಂದು ವಾಯುದಾಳಿಯಲ್ಲ ಅದಕ್ಕೂ ಮೀರಿದ ಕ್ರಮಕೈಗೊಳ್ಳುತ್ತೇವೆಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೋಮವಾರ ಎಚ್ಚರಿಸಿದ್ದಾರೆ.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಭಾರತದ ಗಡಿಗಳಲ್ಲಿ 500ಕ್ಕೂ ಹೆಚ್ಚು ಉಗ್ರರು ಗಡಿ ದಾಟಲು ಸಿದ್ಧರಾಗಿ ನಿಂತಿದ್ದಾರೆ. ನಮ್ಮ ಗಡಿ ದಾಟುವ ಸಲುವಾಗಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಇಂತಹ ಕದನ ವಿರಾಮ ಉಲ್ಲಂಘನೆಗೆ ಯಾವ ರೀತಿ ಉತ್ತರ ನೀಡಬೇಕೆಂಬುದು ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ. 

ಕದನ ವಿರಾಮದಂತಹ ವರ್ತನೆಗೆ ಯಾವ ರೀತಿಯ ನಡೆ ತೆಗೆದುಕೊಳ್ಳಬೇಕೆಂಬುದು ನಮ್ಮ ಸೇನೆಗೆ ತಿಳಿದೇ ಇದೆ. ಗಡಿಯಲ್ಲಿ ನಾವು ಚಟುವಟಿಕೆಗಳಿಂದ ಇದ್ದು, ಸಾಕಷ್ಟು ಒಳನುಸುಳಿಕೆಗಳು ವಿಫಲಗೊಳ್ಳುವಂತೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ 46 ಸಿಆರ್'ಪಿಎಫ್ ಯೋಧರು ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ, ಬಾಲಕೋಟ್ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿತ್ತು. ಇದರಂತೆಯೇ ಮತ್ತೊಂದು ದಾಳಿ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೊಮ್ಮೆ ವಾಯುದಾಳಿ ಏಕೆ? ಇದಕ್ಕೂ ಮೀರಿದ ಕ್ರಮ ಕೈಗೊಳ್ಳುತ್ತೇವೆಂದು ಹೇಳಿದ್ದಾರೆ. 

ಕಾಶ್ಮೀರದಲ್ಲಿ ಈಗಲೂ ವಾತಾವರಣ ತಿಳಿಗೊಂಡಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಅವರು, ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗತಿಗೆ ಬಂದಿವೆ. ಎಂದಿನಂತೆಯೇ ಅಂಗಡಿ ಮುಗ್ಗಟ್ಟುಗಳು ತೆರೆಯುತ್ತಿವ. ಶೆಟರ್ ಗಳನ್ನು ಕೆಳಗೆ ಬಿಟ್ಟಿರುವುದು ಬಿಟ್ಟರೆ, ವ್ಯಾಪಾರಗಳು ಎಂದಿನಂತೆಯೇ ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 

ಪ್ರಸ್ತುತ ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಅಡಗಿ ಕುಳಿತಿರುವ ಉಗ್ರರು ಹಾಗೂ ಪಾಕಿಸ್ತಾನದಲ್ಲಿರುವ ಅವರ ಮುಖ್ಯಸ್ಥರ ನಡುವೆ ಸಂವಹನ ಸ್ಥಗಿತಗೊಂಡಿದೆ. ಆದರೆ, ಜನರಿಂದ ಜನರ ನಡುವಿನ ಸಂಪರ್ಕ ಇನ್ನೂ ಉಳಿದಿದೆ. ಸೇನೆ ಎಂತಹದ್ದೇ ಪರಿಸ್ಥಿತಿ ಎದುರಾದಲೂ ಅದನ್ನು ಎದುರಿಸಲು ಸಿದ್ಧವಾಗಿದೆ. ನಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com