ಕಾಕಿನಾಡ: ಭಾರತದೊಂದಿಗೆ ಯುದ್ದ ಮಾಡುವ ಸಾಹಸ ತೋರಿಸಿದರೆ ಪಾಕಿಸ್ಥಾನ ವಿಶ್ವ ಭೂಪಟದಿಂದಲೇ ಮಾಯವಾಗಲಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ ಹೇಳಿದ್ದಾರೆ.
ಆಂಧ್ರಪ್ರದೇಶದ ಕಾಕಿನಾಡದಲ್ಲಿ ‘ಜನ್ ಜಾಗರಣ್’ ಕಾರ್ಯಕ್ರಮದಲ್ಲಿ ಮಾತನಾಡಿದ ಕಿಶನ್ ರೆಡ್ಡಿ, ಒಂದು ವೇಳೆ ಯುದ್ದ ನಡೆದರೆ ಪಾಕಿಸ್ಥಾನ ಸರ್ವನಾಶವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುತ್ತಿದೆ. ನಮ್ಮದು ದೇಶ ಪ್ರೇಮದ ಸರ್ಕಾರ ಎಂದು ಕಿಶನ್ ರೆಡ್ಡಿ ತಿಳಿಸಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದ ವಿಷಯದಲ್ಲಿ ಮಾತನಾಡಿದ ಅವರು ಸಮಯ ಬಂದಾಗ ಸರಿಯಾದ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಜಮ್ಮು ಮತ್ತು ಕಾಶ್ಮಿರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಯಾವುದೇ ರೀತಿಯ ಗಲಭೆ ಅಥವಾ ದೊಂಬಿಗಳಾಗಿಲ್ಲ. ಇದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮಿರದಲ್ಲಿ ಆರ್ಟಿಕಲ್ 370 ನೇ ವಿಧಿಯನ್ನು ಜಾರಿಗೆ ತಂದಿದ್ದರಿಂದ ಕಳೆದ 70 ವರ್ಷಗಳಲ್ಲಿ , ಭಯೋತ್ಪಾದನೆ, ರಕ್ತಪಾತ, ಬಾಂಬ್ ಬ್ಲಾಸ್ಟ್ ಮುಂತಾದ ಅಹಿತಕರ ಘಟನೆಗಳು ನಡೆದಿದೆಯೇ ಹೊರತು ಯಾವುದೇ ಅಭಿವೃದ್ದಿಯಾಗಿಲ್ಲ ಎಂದು ಹೇಳಿದ್ದಾರೆ.
Advertisement