ನವದೆಹಲಿ: ವಿಶ್ವಸಂಸ್ಥೆ ಹವಾಮಾನ ಶೃಂಗದಲ್ಲಿ ವಿಶ್ವ ನಾಯಕರನ್ನೇ ತರಾಟೆಗೆ ತೆಗೆದುಕೊಂಡ ಸ್ವೀಡನ್ ದೇಶದ ಯುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿರುವಂತೆ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ.
ಹವಾಮಾನ ವೈಪರೀತ್ಯ ಕುರಿತಂತೆ ಜನ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿರುವ 16 ವರ್ಷದ ಗ್ರೇಟ್ ಥನ್ಬರ್ಗ್, ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂದು ರೋಹಿತ್ ಶರ್ಮಾ ಕೊಂಡಾಡಿದ್ದಾರೆ.
ನಮ್ಮ ಗ್ರಹದ ರಕ್ಷಣೆ ಮಾಡುವುದನ್ನು ನಮ್ಮ ಮಕ್ಕಳಿಗೆ ನೀಡುವುದು ನ್ಯಾಯವಲ್ಲ. ಗ್ರೆಟಾ ಥನ್ಬರ್ಗ್ ನೀವು ಸ್ಪೂರ್ತಿಯಾಗಿದ್ದೀರಿ. ಇದೀಗ ಕ್ಷಮೆ ಎಂಬುದೇ ಇಲ್ಲ.ಭವಿಷ್ಯದ ಪೀಳಿಗೆಗೆ ನಾವು ಸುರಕ್ಷಿತ ಗ್ರಹವೊಂದನ್ನು ನೀಡಬೇಕಾಗಿದೆ. ಬದಲಾವಣೆಯ ಸಮಯ ಇದಾಗಿದೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆ ಹವಾಮಾನ ಶೃಂಗದಲ್ಲಿ ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಮಾಡಲು ವಿಫಲರಾಗಿರುವ ವಿಶ್ವನಾಯಕರು ನನ್ನ ಪೀಳಿಗೆಗೆ ದ್ರೋಹ ಮಾಡಿದ್ದಾರೆ, ನಿಮಗೆ ಎಷ್ಟು ಧೈರ್ಯ ಎಂದು ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಳು.
Advertisement