ಕಳೆದ ಜುಲೈ 30ರಂದು ನಡೆದಿದ್ದ ಉಗ್ರರ ಒಳ ನುಸುಳಿವಿಕೆ ಯತ್ನ
ಶ್ರೀನಗರ: ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನದ ಉಗ್ರರು ಯತ್ನಿಸಿದ್ದು, ಈ ವೇಳೆ ಭಾರತೀಯ ಯೋಧರು ದಾಳಿ ನಡೆಸುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತಂತೆ ಭಾರತೀಯ ಸೇನೆ ಸಿಸಿಟಿವಿ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಸುಮಾರು 5 ರಿಂದ 6 ಮಂದಿ ಉಗ್ರರು ಏಕಕಾಲದಲ್ಲಿ ಗಡಿಯೊಳಗೆ ನುಸುಳಲು ಯತ್ನಿಸಿದ್ದು, ಈ ವೇಳೆ ಉಗ್ರರನ್ನು ಗುರಿಯಾಗಿಸಿಕೊಂಡ ಭಾರತೀಯ ಯೋಧರು ಗುಂಡಿನ ಸುರಿಮಳೆ ಗರೆದಿದ್ದಾರೆ. ಗುಂಡಿನ ಸದ್ದುಕೇಳುತ್ತಿದ್ದಂತೆಯೇ ಉಗ್ರರು ಅಲ್ಲಿಂದ ಕಾಲ್ಕೀಳಲು ಆರಂಭಿಸಿದ್ದಾರೆ.
ಕಳೆದ ಜುಲೈ 30ರಂದು ಈ ಘಟನೆ ನಡೆದಿದ್ದು, LoC ಬಳಿಯ ಕುಪ್ವಾರಾ ವಲಯದಲ್ಲಿ ಉಗ್ರರು ನುಸುಳಲು ಮಾಡುತ್ತಿರುವ ವಿಫಲ ಪ್ರಯತ್ನ ಬೆಳಕಿಗೆ ಬಂದಿದೆ. ಇದೀಗ ಈ ವಿಡಿಯೋವನ್ನು ಭಾರತೀಯ ಸೇನೆ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಇನ್ನು ಬಾಲಾಕೋಟ್ ವಾಯುದಾಳಿ ಬಳಿಕ ಇದೀಗ ಮತ್ತೆ ಬಾಲಾಕೋಟ್ ಉಗ್ರಕ್ಯಾಂಪ್ ಕಾರ್ಯಪ್ರವೃತ್ತವಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು. ಅಲ್ಲದೆ ಸಮಾರು 400ರಿಂದ 500 ಉಗ್ರರು ಇಲ್ಲಿನ ಸುಮಾರು 10 ರಿಂದ 12 ಕ್ಯಾಂಪ್ ಗಳಲ್ಲಿದ್ದಾರೆ ಎಂದು ಹೇಳಿದ್ದರು. ಆದರೆ ಬಿಪಿನ್ ರಾವತ್ ಅವರ ಈ ಹೇಳಿಕೆಯನ್ನು ಪಾಕಿಸ್ತಾನ ಅಲ್ಲಗಳೆದಿತ್ತು. ಇದೀಗ ಗಡಿಯಲ್ಲಿ ಉಗ್ರರ ಒಳನುಸುಳಿವಿಕೆ ಯತ್ನ ಬಿಪಿನ್ ರಾವತ್ ರ ಹೇಳಿಕೆಯನ್ನು ಸ್ಪಷ್ಟೀಕರಿಸಿದೆ.
Advertisement