ಮೋದಿ ಮುಖಭಂಗಕ್ಕೆ ಕುತಂತ್ರ: ಜಾಧವ್ ಬಳಿಕ ಮತ್ತೊಬ್ಬ ಅಮಾಯಕನಿಗೆ ಉಗ್ರ ಪಟ್ಟಕ್ಕೆ ಪಾಕ್ ಯತ್ನ

ವಿಶ್ವಸಂಸ್ಥೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖಭಂಗವಾಗುವಂತೆ ಮಾಡಲು ಪಾಕಿಸ್ತಾನ ಕುತಂತ್ರ ನಡೆಸುತ್ತಿದ್ದು, ಕುಲಭೂಷಣ್ ಜಾಧವ್ ಪ್ರಕರಣದ ಬಳಿಕ ಅಂತಹುದ್ದೇ ಮತ್ತೊಂದು ಪ್ರಯತ್ನ ನಡೆಸಲು ಹೋಗಿ ವಿಫಲವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖಭಂಗವಾಗುವಂತೆ ಮಾಡಲು ಪಾಕಿಸ್ತಾನ ಕುತಂತ್ರ ನಡೆಸುತ್ತಿದ್ದು, ಕುಲಭೂಷಣ್ ಜಾಧವ್ ಪ್ರಕರಣದ ಬಳಿಕ ಅಂತಹುದ್ದೇ ಮತ್ತೊಂದು ಪ್ರಯತ್ನ ನಡೆಸಲು ಹೋಗಿ ವಿಫಲವಾಗಿದೆ. 

ಇರಾನ್ ನಲ್ಲಿ ಉದ್ಯಮ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್ ರನ್ನು ಅಪಹರಿಸಿದ್ದ ಪಾಕಿಸ್ತಾನ ಅವರನ್ನು ಬೇಹುಗಾರ ಎಂದು ದೂಷಿಸಿತ್ತು. ಇದೀಗ ಆಫ್ಘಾನಿಸ್ತಾನದ ಪುನಾನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಭಾರತದ ಎಂಜಿನಿಯರ್ ವೇಣ್ ಮಾಧವ್ ಡೋಂಗರಾ ಎಂಬುವವರಿಗೆ ಉಗ್ರವಾದಿ ಪಟ್ಟ ಕಟ್ಟಿ ಅವರನ್ನು ವಿಶ್ವಸಂಸ್ಥೆಯ ಮೂಲಕ ನಿಷೇಧಿಸಲು ಚೀನಾ ನೆರವಿನಿಂದ ಪ್ರಯತ್ನ ನಡೆಸಿದೆ. 

ಈ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಕೇಂದ್ರ ಸರ್ಕಾರ ಆಫ್ಘಾನಿಸ್ತಾನದಲ್ಲಿದ್ದ ವೇಣು ಅವರನ್ನು ರಕ್ಷಣೆ ಮಾಡಿ, ತಾಯ್ನಾಡಿಗೆ ಕರೆತರುವಲ್ಲಿ ಸಫಲವಾಗಿದೆ. 

ಕೇಂದ್ರ ಸರ್ಕಾರ ಏನಾದರೂ ಈ ವಿಚಾರದಲ್ಲಿ ಸ್ವಲ್ಪ ಪ್ರಜ್ಞೆ ತಪ್ಪಿದ್ದರೂ ಪಾಕಿಸ್ತಾನ ಮತ್ತೆ ತನ್ನ ಕುತಂತ್ರ ಬುದ್ಧಿ ಪ್ರದರ್ಶಿಸಲು ದಾರಿಯಾಗುತ್ತಿತ್ತು. ವೇಣು ಮಾಧವ್ ರಕ್ಷೆ ವಿಚಾರದಲ್ಲಿ ಭಾರತ ಏನಾದರೂ ಮಧ್ಯ ಪ್ರವೇಶ ಮಾಡದೇ ಹೋಗಿದ್ದಿದ್ದರೆ, ಆಫ್ಘಾನಿಸ್ತಾನದಿಂದಲೇ ವೇಣು ಅವರನ್ನು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಅಪಹರಿಸುವ ಸಾಧ್ಯತೆಗಳಿತ್ತು. ವಿಶೇಷವೆಂದರೆ, ಭಯೋತ್ಪಾದಕರಿಗೆ ನೆರವು ನೀಡಿದ ಆಪಾದನೆಯಡಿ ಎಂಜಿನಿಯರ್ ವಿರುದ್ಧ ಪಾಕಿಸ್ತಾನದಲ್ಲಿ ಎಫ್ಐಆರ್ ದಾಖಲಾಗಿತೆ. 

ಆರ್'ಪಿಜಿ ಗ್ರೂಪ್'ನ ಅಂಗಸಂಸ್ಥೆಯಾದ ಕೆಇಸಿ ಇಂಟರ್ ನ್ಯಾಷನಲ್ ಎಂಬ ಸಂಸ್ಥೆಯಲ್ಲಿ ವೇಣು ಅವರು ಎಂಜಿನಿಯರ್ ಆಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 

2015ರಲ್ಲಿ ಪೇಷಾವರ ವಾಯುನೆಲೆ ಮೇಲೆ ದಾಳಿ ನಡೆಸಿ 29 ಮಂದಿಯನ್ನು ಹತ್ಯೆಗೈದ ಉಗ್ರ ಸಂಘಟನೆಯ ಜೊತೆಗೆ ಡೋಂಗರಾ ನಂಟು ಹೊಂದಿದ್ದಾರೆಂದು ಬಿಂಬಿಸಲು ಪಾಕಿಸ್ತಾನ ಯತ್ನ ನಡೆಸಿತ್ತು. ಚೀನಾ ನೆರವಿನೊಂದಿಗೆ ವೇಣು ಅವರನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸುವ ಪ್ರಯತ್ನವನ್ನೂ ಮಾಡಿತ್ತು. 

ಪಾಕಿಸ್ತಾನ ಎಂಬುದು ಉಗ್ರರ ದೇಶ, ಟೆರರಿಸ್ತಾನ ಎಂದೆಲ್ಲಾ ಜರಿಯುತ್ತಿರುವ ಭಾರತ ಹಾಗೂ ಪ್ರಧಾನಿ ಮೋದಿಯವರಿಗೆ ಮುಖಭಂಗ ಉಂಟು ಮಾಡುವ ಪ್ರಯತ್ನ ಇದಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಆರಂಭವಾದ ಈ ತಂತ್ರಗಾರಿಕೆಯ ಇದೇ ತಿಂಗಳು ವಿಶ್ವಸಂಸ್ಥೆಯಲ್ಲಿ ಉಗ್ರ ಪಟ್ಟ ಕಟ್ಟುವುದರೊಂದಿಗೆ ಅಂತ್ಯ ಕಾಣಬೇಕಿತ್ತು. 

ಪಾಕಿಸ್ತಾನದ ಈ ಪ್ರಯತ್ನ ಫಲಿಸಿದ್ದೇ ಆಗಿದ್ದರೆ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಹರಿಹಾಯುತ್ತಿರುವ ಪ್ರಧಾನಿ ಮೋದಿಯವರಿಗೆ ಮುಜುಗರವಾಗುತ್ತಿತ್ತು. ಪಾಕಿಸ್ತಾನದ ಉದ್ದೇಶವೂ ಅದೇ ಆಗಿತ್ತು ಎಂದು ಹೇಳಲಾಗುತ್ತಿದೆ. 

ಇದರ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತ ಭಾರತ ಸರ್ಕಾರ ದಿಢೀರನೇ ವೇಣು ಮಾಧವ್ ಅವರನ್ನು ತಾಯ್ನಾಡಿಕೆ ಕರೆಸಿಕೊಂಡಿದೆ. ಆದರೆ, ಕೆಇಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ತಾಲಿಬಾನ್ ವಶದಲ್ಲಿದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com