ಲಖನೌ: ಉತ್ತರ ಭಾರತದಲ್ಲಿ ಮತ್ತೆ ಮಳೆಯ ಆರ್ಭಟ ಜೋರಾಗಿದ್ದು, ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಸಂಭವಿಸಿದ ವಿವಿಧ ಮಳೆ ಅವಘಡಗಳಲ್ಲಿ ಈ ವರೆಗೂ 72 ಮಂದಿ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು-ಕಾಶ್ಮೀರದಲ್ಲಿ ಒಟ್ಟಾರೆ 72 ಮಂದಿ ಮೃತಪಟ್ಟಿದ್ದಾರೆ. ಇನ್ನು ನಾಲ್ಕು ರಾಜ್ಯಗಳ ಪೈಕಿ ಮಳೆಯಿಂದಾಗಿ ಅತ್ಯಂತ ಹೊಡತಕ್ಕೆ ಬಿದ್ದ ರಾಜ್ಯವೆಂದರೆ ಅದು ಉತ್ತರ ಪ್ರದೇಶ. ಮಳೆಯಿಂದಾಗಿ ರಾಜಧಾನಿ ಲಖನೌ ಪ್ರಮುಖ ಪ್ರದೇಶಗಳು ಜಲಾವೃತ್ತವಾಗಿವೆ. ಇನ್ನು ಬಿಹಾರದಲ್ಲೂ ಅತೀ ಹೆಚ್ಚು ಮಳೆಯಾಗಿದ್ದು, ಸಂಚಾರ, ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯವಾಗಿದೆ.
ಬಿಹಾರದ ರಾಜಧಾನಿ ಪಾಟ್ನಾದ ದೊಡ್ಡ ವೈದ್ಯಕೀಯ ಕಾಲೇಜು ನಳಂದಾ ವೈದ್ಯಕೀಯ ಕಾಲೇಜು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಶುಕ್ರವಾರದಿಂದ ಈ ವರೆಗೂ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 102.2 ಮಿ ಮೀ ಮಳೆಯಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 102 ಮಿಮೀ, ವಾರಣಾಸಿಯಲ್ಲಿ 84.2 ಮಿಮೀ ಮಳೆಯಾಗಿದೆ.
ಇನ್ನು ಉತ್ತರ ಪ್ರದೇಶವೊಂದರಲ್ಲೇ ಈ ವರೆಗೂ ಮಳೆಯಿಂದಾಗಿ 24 ಮಂದಿ ಬಲಿಯಾಗಿದ್ದು, ಸಂತ್ರಸ್ಥರ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯಾನಾಥ್ ತಲಾ 4 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
Advertisement