ಕಾರ್ಮಿಕರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಡೆವಲಪರ್ಸ್‌ಗಳ ಮೇಲೆ ಕ್ರಮ; ಆರ್.ಅಶೋಕ್ 

ಕೊರೋನಾ ವೈರಸ್ ಸೋಂಕು ಹಿನ್ನೆಲೆ ಕಟ್ಟಡ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಇಂದು ಕ್ರೆಡೈ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ಆರ್ ಅಶೋಕ್
ಆರ್ ಅಶೋಕ್

ಬೆಂಗಳೂರು: ಕೊರೋನಾ ವೈರಸ್ ಸೋಂಕು ಹಿನ್ನೆಲೆ ಕಟ್ಟಡ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸುವ ಉದ್ದೇಶದಿಂದ ಇಂದು ಕ್ರೆಡೈ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಯಾವ ಕಾರ್ಮಿಕರೂ ಇರುವ ಸ್ಥಳ ಬಿಟ್ಟು ಬೇರೆಡೆ ತೆರಳುವಂತಿಲ್ಲ. ಕಾರ್ಮಿಕರಿಗೆ ಅಗತ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೂಡಲೆ ಎಲ್ಲಾ ಸೈಟ್‌ಗಳಿಗೂ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವರು, ಯಾವೊಬ್ಬ ಕಾರ್ಮಿಕರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ, ಡೆವಲಪರ್ಸ್‌ಗಳಿಗೆ ಹಲವು ನಿದೇರ್ಶನ ನೀಡಲಾಗಿದೆ. ನಗರದಲ್ಲಿ ಹೊರರಾಜ್ಯ, ಜಿಲ್ಲಾ, ನಗರ ಸೇರಿದಂತೆ ಸುಮಾರು 65,000 ಕಾರ್ಮಿಕರ ಪೈಕಿ 30,000ಕ್ಕೂ ಹೆಚ್ಚು ಕಾರ್ಮಿಕರು ನಗರದಲ್ಲಿದ್ದು, ಅವರಿಗೆ ಇರುವ ಸ್ಥಳದಲ್ಲೇ ವಸತಿ, ಊಟದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಕಾರ್ಮಿಕರಿಗೆ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು. ಜೊತೆಗೆ ಸಬ್ ಕಂಟ್ರಾಕ್ಟರ್ಸ್‌ಗಳಿಗೆ ಸಹಕಾರ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಮುಂದೆ ಕಾರ್ಮಿಕರು ರಸ್ತೆಯಲ್ಲಿ ಓಡಾಡುವುದು ಕಂಡುಬಂದರೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸಲು ಕ್ರಮ ವಹಿಸಲಾಗುವುದು. ಸಮರ್ಪಕ ವೈದ್ಯಕೀಯ ಸೇವೆ ಕಲ್ಪಿಸಲು ಕೂಡ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿರುವ ಬಡವರ್ಗದ ಜನ, ಕೊಳಗೇರಿ ಪ್ರದೇಶದಲ್ಲಿರುವ ಜನರಿಗೆ ಪಾಲಿಕೆ ವತಿಯಿಂದ ಉಚಿತವಾಗಿ 2ರಿಂದ 3 ಲಕ್ಷ ಲೀ. ನಂದಿನಿ ಹಾಲು ವಿತರಣೆ ಮಾಡಲು ಮುಂದಾಗಿದ್ದು, ನಾಳೆಯಿಂದ ಏಪ್ರಿಲ್ 14ರವರೆಗೆ ಎಲ್ಲಾ ವಾರ್ಡ್‌ಗಳಲ್ಲಿ ಉಚಿತವಾಗಿ ನಂದಿನಿ ಹಾಲು ವಿತರಣೆ ಮಾಡಲು ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com