ಲಾಕ್‌ಡೌನ್ ಸಮಯದಲ್ಲಿ ಉಳಿತಾಯ ಮೇಲಿನ ಬಡ್ಡಿದರ ಕಡಿತದ ಸರ್ಕಾರದ ಕ್ರಮಕ್ಕೆ ಚಿದಂಬರಂ ಟೀಕೆ

ಹಲವು ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರವನ್ನು ರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ಹಲವು ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಈ ನಿರ್ಧಾರ ತಾಂತ್ರಿಕವಾಗಿ ಸರಿಯಾಗಿರಬಹುದಾದರೂ, ನಿಜವಾಗಿಯೂ ಇಂತಹ ಕ್ರಮಕ್ಕೆ ಕೆಟ್ಟ ಸಮಯ ಇದಾಗಿದೆ ಎಂದು ಹೇಳಿದ್ದಾರೆ.

‘ತೀವ್ರ ಸಂಕಷ್ಟದ ಮತ್ತು ಆದಾಯದ ಬಗ್ಗೆ ಅನಿಶ್ಚಿತತೆಯ ಸಮಯದಲ್ಲಿ, ಜನರು ತಮ್ಮ ಉಳಿತಾಯದ ಮೇಲಿನ ಬಡ್ಡಿ ಆದಾಯವನ್ನು ಅವಲಂಬಿಸಿರುತ್ತಾರೆ. ಈ ಕುರಿತಂತೆ ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಬೇಕು ಮತ್ತು ಜೂನ್ 30 ರವರೆಗೆ ಹಳೆಯ ಬಡ್ಡಿ ದರಗಳನ್ನೇ ಮುಂದುವರೆಸಬೇಕು ಎಂದು ಚಿದಂಬರಂ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಕಿಸಾನ್ ವಿಕಾಸ್ ಪತ್ರದಂತಹ ಅನೇಕ ಉಳಿತಾಯಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಲು ಸರ್ಕಾರ ನಿರ್ಧರಿಸಿದ ನಂತರ ಚಿದಂಬರಂ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಕೆಲವೊಮ್ಮೆ ಸರ್ಕಾರ ಅವಿವೇಕಿ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತದೆ ಎಂಬುದು ತಮಗೆ ತಿಳಿದಿದೆ, ಆದರೆ ಈ ಸಲಹೆಯು ಎಷ್ಟು ಮೂರ್ಖತನದ್ದಾಗಿದೆ ಎಂದು ಆಶ್ಚರ್ಯಚಕಿತನಾಗಿದ್ದೇನೆ’ ಎಂದು ಚಿದಂಬರಂ ಲೇವಡಿ ಮಾಡಿದ್ದಾರೆ.

ಮೂರು ತ್ರೈಮಾಸಿಕಗಳಲ್ಲಿ ಕ್ರಮವಾಗಿ ಶೇ 5.6, 5.1 ಮತ್ತು 4.7 ರ ಬೆಳವಣಿಗೆ ದರ ಕಂಡ ನಂತರ 2019-20 ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿ ನಿನ್ನೆ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ.

‘ನಾಲ್ಕನೇ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ 4 ಕ್ಕಿಂತ ಹೆಚ್ಚಿರುವ ಸಾಧ್ಯತೆ ಇಲ್ಲ. ಆದ್ದರಿಂದ 2019-20ರ ವಾರ್ಷಿಕ ಜಿಡಿಪಿ ವೃದ್ಧಿ ಶೇ 4.8 ರಷ್ಟು ನಿರಾಶಾದಾಯಕವಾಗಿರಬಹುದು. ತಮ್ಮ ದೃಷ್ಟಿಯಲ್ಲಿ ನಾವು ಈಗ ಬೆಳವಣಿಗೆಯ ಬಗ್ಗೆ ಚಿಂತಿಸಬೇಕಿಲ್ಲ. ಜನರ ಜೀವವನ್ನು ಉಳಿಸುವತ್ತ ಗಮನ ಹರಿಸಬೇಕು.’ ಎಂದು ಚಿದಂಬರಂ ಹೇಳಿದ್ದಾರೆ. ಕೊರೊನ ವೈರಸ್ ಹರಡುವಿಕೆ ನಿಯಂತ್ರಿಸುವ ಕ್ರಮವಾಗಿ ಘೋಷಿಸಲಾಗಿರುವ ರಾಷ್ಟ್ರವ್ಯಾಪಿ ಲಾಕ್‍ಡೌನ್‍ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1.76 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ ಕೆಲ ದಿನಗಳ ನಂತರ ಸೋಂಕು ಸವಾಲು ಎದುರಿಸಲು ಸರ್ಕಾರ ಎರಡನೇ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಚಿದಂಬರಂ ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com