'ಕೊರೋನಾ' ಅಂಧಕಾರ ದೂರಾಗಿಸಲು ಏಪ್ರಿಲ್ 5ರಂದು ದೀಪ ಹಚ್ಚಿ: ಪ್ರಧಾನಿ ಮೋದಿ ಕರೆಗೆ ಭಾರತೀಯರ ಬೆಂಬಲ
ನವದೆಹಲಿ: ಕೊರೋನಾ ವೈರಸ್ ಎಂಬ ಅಂಧಕಾರದ ದೂರಾಗಿಸಲು ಏಪ್ರಿಲ್ 5ರ ರಾತ್ರಿ 9ಗಂಟೆಗೆ ವಿದ್ಯುತ್ ದೀಪ ಆರಿಸಿ, ಮುಂಬತ್ತಿ ಹಚ್ಚುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಕರೆಗೆ ಹಲವು ಭಾರತೀಯರು ಬೆಂಬಲ ನೀಡಿದ್ದಾರೆ.
ನಾವು ಪ್ರಧಾನಮಂತ್ರಿಗಳೊಂದಿಗಿದ್ದೇವೆ. ನಮ್ಮ ಮನೆಗಳಲ್ಲಿಯೇ ಇದ್ದು, ದೀಪ ಹಚ್ಚುತ್ತೇವೆ. ದೇಶದ ಇತರೆ ಪ್ರಜೆಗಳೂ ಕೂಡ ದೀಪ ಹಚ್ಚುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅಲ್ಲದೆ, ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಹೊರಗೆ ಬರದಂತೆಯೂ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ದೆಹಲಿ ನಿವಾಸಿಯೊಬ್ಬರು ಹೇಳಿದ್ದಾರೆ.
ಅಮೃತಸರದ ನಿವಾಸಿ ತರುಣಿ ಚುಘ್ ಮಾತನಾಡಿ, ಇದು ಅತ್ಯಂತ ವಿಭಿನ್ನವಾಗಿದೆ. ದೇಶದ ನಾಯಕರು ಇಂತಹ ಹೊಸ ಹೊಸ ಆಲೋಚನೆ ಮಾಡುತ್ತಿರುವುದು ಸಂತಸ ತಂದಿದೆ. ಇಂತಹ ಪರಿಸ್ಥಿತಿಯಲ್ಲೂ ಮೋದಿ ಜಾಗತಿಕ ನಾಯಕರಾಗಿಯೇ ಇದ್ದಾರೆ. 130 ಕೋಟಿ ಭಾರತೀಯರಿಗೆ ಮೋದಿ ಹೀರೋ ಆಗಿದ್ದಾರೆ. ಲಾಕ್ ಡೌನ್ ಆಗಿ 9 ದಿನಗಳು ಕಳೆದಿದ್ದರೂ ಮೋದಿಯವರು ದೇಶದ ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಒಗ್ಗಟ್ಟು ಪ್ರದರ್ಶಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಠಿಣ ಸಂದರ್ಭದಲ್ಲೂ ಜನರಗಿಗಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಧನ್ಯವಾದ ಹೇಳುವಂತೆ ತಿಳಿಸುತ್ತಿದ್ದಾರೆ. ಕೊರೋನಾ ವಿರುದ್ಧ ಖಂಡಿತವಾಗಿಯೂ ನಾವು ಗೆಲುವು ಸಾಧಿಸುತ್ತೇವೆಂದು ಹೇಳಿದ್ದಾರೆ.
ಮೋದಿಯವರ ಈ ನಿರ್ಧಾರಕ್ಕೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಕೂಡ ಸಂತಸ ಹಾಗೂ ಬೆಂಬಲ ನೀಡಿದ್ದಾರೆ.
ನಮ್ಮ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮೋದಿಯವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ಖಂಡಿತವಾಗಿಯೂ ಅವರಿಗೆ ಬೆಂಬಲ ನೀಡುತ್ತೇನೆ. ಭಾನುವಾರದ ಈ ಕಾರ್ಯಕ್ರಮದಲ್ಲಿ ನಾವೂ ಭಾಗಿಯಾಗಬೇಕೆಂದು ಗೋರಖ್ಪುರ ನಿವಾಸಿ ಅನಿಶಾ ಎಂಬುವವರು ಹೇಳಿದ್ದಾರೆ.