ನವದೆಹಲಿ: ಕೊರೋನಾ ವೈರಸ್ ಎಂಬ ಗಾಢಾಂಧಕಾರದಿಂದ ದೇಶವನ್ನು ಹೊಸ ಬೆಳಕಿನೆಡೆಗೆ ಒಯ್ಯಲು ಪ್ರಧಾನಿ ಮೋದಿಯವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಭಾನುವಾರ ಭರ್ಜರಿ ಯಶಸ್ಸು ಲಭಿಸುವ ಎಲ್ಲಾ ಸಾಧ್ಯತೆಗಳು ಕಾಣಿಸಿತೊಡಗಿವೆ.
ಇಂದು ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ದೀಪ ಬೆಳಗುವಂತೆ ಮೋದಿಯವರು ದೇಶದ ಜನತೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಮೋದಿಯವರು ಕರೆ ನೀಡಿರುವ ಹಿನ್ನೆಲೆಯಲ್ಲಿ ದೀಪಗಳ ಎಂದಿನ ಮಾರಾಟಕ್ಕಿಂತಲೂ ಶೇ.50ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.
ದೀಪಗಳ ಮಾರಾಟ ಶೇ.50ರಷ್ಟು ಹೆಚ್ಚಿದೆ. ಅಲ್ಲದೆ, ಸಾಕಷ್ಟು ಆರ್ಡರ್ ಗಳೂ ಕೂಡ ಬರುತ್ತಿವೆ. ಮೋದಿಯವರ ಮನವಿ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಮೋದಿಯವರ ಅಭಿಯಾನಕ್ಕೆ ನಾವು ಕೈಜೋಡಿಸುತ್ತೇವೆಂದು ಅಂಗಡಿ ಮಾಲೀಕ ರಾಮ್ ರವಿ ಕುಮಾರ್ ಅವರು ಹೇಳಿದ್ದಾರೆ.
ಲಾಕ್ ಡೌನ್ ಪರಿಣಾಮ ಜನರು ಹೆಚ್ಚಾಗಿ ಬರುತ್ತಿರಲಿಲ್ಲ. ಆದರೆ, ಇಂದು ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಫೋನ್ ಗಳ ಮೂಲಕ ಆರ್ಡರ್ ಗಳೂ ಬರುತ್ತಿವೆ. ಗ್ರಾಹಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಮತ್ತೊಬ್ಬ ಅಂಗಡಿ ಮಾಲೀಕರು ಹೇಳಿದ್ದಾರೆ.
Advertisement