ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ, ಅನಗತ್ಯವಾಗಿ ಅಭಿಯಾನಕ್ಕೆ ಕರೆ ನೀಡುತ್ತಿರುವವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಮಾಡುತ್ತಿರುವ ಕೆಲಸಗಳನ್ನು ಗುರುತಿಸಿ ಗೌರವ ಸಲ್ಲಿಸಲು ಏ.12 ರಂದು 5 ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ತಟ್ಟಬೇಕೆಂಬ ಅಭಿಯಾನಕ್ಕೆ ಕರೆ ನೀಡಲಾಗಿತ್ತು. ಅಭಿಯಾನದ ಕುರಿತ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕಿಡಿಗೇಡಿತನವೆಂದು ಹೇಳಿದ್ದಾರೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಗೌರವಿಸಲು ಅಭಿಯಾನಕ್ಕೆ ಕರೆ ನೀಡಿರುವುದು ಯಾರದ್ದೋ ಸೌಹಾರ್ದಯುತ ಭಾವನೆ ಇದ್ದಿರಬೇಕು, ಆದರೆ ನಿಮಗೆ ಮೋದಿ ಮೇಲೆ ಅಷ್ಟೊಂದು ಪ್ರೀತಿ, ಗೌರವಗಳಿದ್ದರೆ, ಕೊರೋನಾ ವೈರಸ್ ನ ಪರಿಸ್ಥಿತಿ ಸುಧಾರಣೆಯಾಗುವವರೆಗೂ ಒಂದು ಬಡ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದು ಇದಕ್ಕಿಂತಲೂ ದೊಡ್ಡ ಗೌರವ ಸೂಚಕವಾದದ್ದು ಬೇರೊಂದು ಇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ತಾವು ದೇಶಕ್ಕಾಗಿ ಮಾಡುತ್ತಿರುವ ಕೆಲಸಗಳಿಗೆ, ತಮ್ಮನ್ನು ಗೌರವಿಸುವುದಕ್ಕಾಗಿ ಏ.12 ರಂದು 5 ನಿಮಿಷಗಳಕಾಲ ಎದ್ದು ನಿಂತು ಚಪ್ಪಾಳೆ ಹೊಡೆಯುವ ಅಭಿಯಾನ ನನ್ನ ಗಮನಕ್ಕೆ ಬಂದಿದ್ದು, ಇದು ಮೇಲ್ನೋಟಕ್ಕೆ ಕಿಡಿಗೇಡಿತನದಂತೆ, ಮೋದಿಯನ್ನು ವಿವಾದದಲ್ಲಿ ಸಿಲುಕಿಸುವ ಷಡ್ಯಂತ್ರದಂತೆ ತೋರುತ್ತದೆ ಎಂದು ಮೋದಿ ಹೇಳಿದ್ದಾರೆ.
Advertisement