ನವದೆಹಲಿ: ಲಾಕ್ ಡೌನ್ ಸಂದರ್ಭದಲ್ಲಿ ರಾಮಯಣ, ಮಹಾಭಾರತದಂತಹ ದೃಶ್ಯ ಕಾವ್ಯಗಳನ್ನು ಮರು ಪ್ರಸಾರ ಮಾಡುವ ಮೂಲಕ ಸರ್ಕಾರಿ ಸ್ವಾಮ್ಯದ ದೂರದರ್ಶನ ಮರಳಿ ತನ್ನ ಗತ ವೈಭವಕ್ಕೆ ಮರಳಿದ್ದು, ವಾರಾಂತ್ಯಕ್ಕೆ ಖಾಸಗಿ ವಾಹಿನಿಗಳನ್ನೂ ಮೀರಿ ಅತೀ ಹೆಚ್ಚು ವೀಕ್ಷಕರನ್ನು ಪಡೆದ ಚಾನೆಲ್ ಆಗಿ ಹೊರಹೊಮ್ಮಿದೆ.
ಏಪ್ರಿಲ್ 3ಕ್ಕೆ ಅಂತ್ಯವಾದಂತೆ ಅತೀ ಹೆಚ್ಚು ವೀಕ್ಷಕರನ್ನು ಪಡೆದ ಚಾನೆಲ್ ಗಳ ಪಟ್ಟಿಯಲ್ಲಿ ದೂರದರ್ಶನ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಈ ಹಿಂದೆ ಖಾಸಗಿ ವಾಹಿನಿಗಳ ಅಬ್ಬರದಲ್ಲಿ ಕಳೆದು ಹೋಗಿದ್ದ ದೂರದರ್ಶನ ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ಮತ್ತೆ ಮೈಕೊಡವಿ ಎದ್ದು ನಿಂತಿದ್ದು, ತನ್ನ ಗತ ಕಾಲದ ದೃಶ್ಯ ಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣ ಸೀರಿಯಲ್ ಗಳನ್ನು ಮರು ಪ್ರಸಾರ ಮಾಡುವ ಮೂಲಕ ತನ್ನ ವೀಕ್ಷಕರ ಸಂಖ್ಯೆಯಲ್ಲಿ ಬರೊಬ್ಬರಿ 40 ಸಾವಿರದಷ್ಟು ಹೆಚ್ಚಳ ಮಾಡಿಕೊಂಡಿದೆ. ಈ ಬಗ್ಗೆ ಬಾರ್ಕ್ (Broadcast Audience Research Council-BARC) ತನ್ನ ವರದಿ ನೀಡಿದ್ದು, ಕಳೆದ ವಾರದಲ್ಲಿ ದೂರದರ್ಶನ ವೀಕ್ಷಕರ ಸಂಖ್ಯೆಯಲ್ಲಿ ಅಗ್ರ ಸ್ಥಾನಕ್ಕೇರಿದೆ.
ಪ್ರಮುಖವಾಗಿ ಐತಿಹಾಸಿಕ ಕಥೆಗಳನ್ನಾಧರಿಸಿದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳ ಮರು ಪ್ರಸಾರ ದೂರ ದರ್ಶನದತ್ತ ಜನ ಮತ್ತೆ ತಿರುಗಿ ನೋಡುವಂತೆ ಮಾಡಿದ್ದು, ಇದರ ಜೊತೆಗೆ ಶಕ್ತಿಮಾನ್, ಬುನಿಯಾದ್ ನಂತಹ ಸೀರಿಯಲ್ ಗಳು ಪ್ರೇಕ್ಷಕರನ್ನು ಕಟ್ಟಿಹಾಕಿದೆ. ಇಷ್ಟೇ ಅಲ್ಲದೆ ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಜಂಗಲ್ ಬುಕ್ ನಂತಹ ಹಿಟ್ ಸೀರಿಯಲ್ ಗಳನ್ನೂ ಮರು ಪ್ರಸಾರ ಮಾಡಲು ನಿರ್ಧರಿಸಲಾಗಿದ್ದು, ಇದು ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆ ಇದೆ.
Advertisement