ಚಂಢೀಗಡ: ಪಂಜಾಬಿನಲ್ಲಿ ಯಾವುದೇ ವಿದೇಶಿ ಪ್ರವಾಸ ಹಿನ್ನೆಲೆ ಹೊಂದಿಲ್ಲದಿದ್ದರೂ 27 ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಈಗಾಗಲೇ ಸಮುದಾಯ ಪ್ರಸರಣ ಘಟ್ಟಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಕೊರೋನಾ ಸೋಂಕಿನ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಸಮುದಾಯ ಪ್ರಸರಣ ಘಟ್ಟಕ್ಕೆ ತಲುಪಿದೆ ಎಂದು ಹೇಳಿದವರಲ್ಲಿ ಅಮರೀಂದರ್ ಸಿಂಗ್ ಮೊದಲಿಗರಾಗಿದ್ದಾರೆ.
ಮುಂದಿನ ದಿನಗಳಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಮತ್ತಷ್ಟು ಭಯಾನಕವಾಗಿರುತ್ತದೆ ಎಂಬ ಆರೋಗ್ಯ ತಜ್ಞರ ಊಹೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ನ್ನು ಮೇ ಒಂದರ ವರೆಗೂ ಮುಂದುವರೆಸಲಾಗುವುದು ಎಂದು ಅಮರೀಂದರ್ ಸಿಂಗ್ ತಿಳಿಸಿದರು.
ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಲಾಕ್ ಡೌನ್ ವಿಸ್ತರಣೆಗೆ ನಿರ್ಧಾರ ಕೈಗೊಳ್ಳಲಾಗಿದ್ದು, ರಬಿ ಬೆಳೆ ಬಿತ್ತನೆಗೆ ರೈತರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಲಾಕ್ ಡೌನ್ ನಿಂದ ಜಿಲ್ಲಾವಾರು ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕೊರೋನಾವೈರಸ್ ಹರಡುವಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ಆರೋಗ್ಯ ತಜ್ಞರ ವರದಿ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಈಗಾಗಲೇ ಸಿದ್ದತೆ ಮಾಡಿಕೊಂಡಿರುವುದಾಗಿ ಹೇಳಿದರು.
ಚಂಢೀಗಡದ ಸಮುದಾಯ ಔಷಧಿ ಇಲಾಖೆಯ ಪಿಇಐಎಂಇಆರ್ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಕೊರೋನಾವೈರಸ್ ಉತ್ತುಂಗದ ಸ್ಥಿತಿ ತಲುಪಲಿದ್ದು, ದೇಶದ ಶೇಕಡಾ 58 ರಷ್ಟು ಮಂದಿ ಈ ಸೋಂಕಿಗೆ ತುತ್ತಾಗಲಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಶೇ. 87 ರಷ್ಟು ಮಂದಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದರು.
ನವೆದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 27 ಮಂದಿಯಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಪಂಜಾಬಿನಲ್ಲಿ ಸಮುದಾಯ ಪ್ರಸರಣ ಘಟ್ಟಕ್ಕೆ ಸೋಂಕು ತಲುಪಿದೆ ಎಂದು ಅಮರೀಂದರ್ ಸಿಂಗ್ ತಿಳಿಸಿದರು.
Advertisement