ನವದೆಹಲಿ: ಲಾಕ್ ಡೌನ್ ಹಿನ್ನಲೆಯಲ್ಲಿ ತಾವು ಬೆಳೆದ ಬೆಳೆಯನ್ನು ಸಾಗಾಟ ಮಾಡಲಾಗದ ಕಷ್ಟ ಪಡುತ್ತಿರುವ ರೈತರ ಪಾಲಿಗೆ ಇದೀಗ ಸಿಹಿಸುದ್ದಿಯೊಂದು ಬಂದಿದ್ದು, ಓಲಾ-ಊಬರ್ ಮತ್ತು ಪೋರ್ಟರ್ ಮಾದರಿಯಲ್ಲೇ ರೈತರ ಬೆಳೆಗಳನ್ನು ಸಾಗಿಸುವ ಸಲುವಾಗಿ ಕಿಸಾನ್ ರಥ ಕಾರ್ಯ ನಿರ್ವಹಿಸಲಿದೆ.
ಹೌದು.. ಕೊರೋನಾ ಲಾಕ್ ಡೌನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧ ಸಡಿಲಗೊಳಿಸಲಾಗಿದೆ. ಕೇಂದ್ರ ಕೃಷಿ ಸಚಿವಾಲಯದ ವತಿಯಿಂದ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಲಾರಿಗಳನ್ನು ಕಾಯ್ದಿರಿಸಲು ಕಿಸಾನ್ ರಥ ಎಂಬ ಆಪ್ ಆರಂಭಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ಓಲಾ, ಉಬರ್ ಟ್ಯಾಕ್ಸಿಗಳನ್ನು ಬುಕ್ ಮಾಡುವ ರೀತಿಯಲ್ಲಿ ಈ ಆಪ್ ಮೂಲಕ ಕೃಷಿ ಉತ್ಪನ್ನ ಸಾಗಾಟಕ್ಕೆ ಲಾರಿಗಳನ್ನು ಬುಕ್ ಮಾಡಬಹುದಾಗಿದೆ.
8 ಭಾಷೆಗಳಲ್ಲಿ ಆಪ್ ಕಾರ್ಯ ನಿರ್ವಹಿಸಲಿದ್ದು, ರೈತರು ಎಷ್ಟು ಪ್ರಮಾಣದ ಕೃಷಿ ಉತ್ಪನ್ನ ಸಾಗಾಟ ಮಾಡುತ್ತಾರೆ ಎಂಬುದನ್ನು ತಿಳಿಸಬೇಕು. ಈ ಮಾಹಿತಿ ವರ್ತಕರು ಮತ್ತು ಸಾಗಣೆದಾರರಿಗೆ ರವಾನೆಯಾಗಿ ದೂರವಾಣಿ ಮೂಲಕ ರೈತರನ್ನು ಸಂಪರ್ಕಿಸಿ ಬಾಡಿಗೆ ದರ ಮತ್ತು ದಿನಾಂಕ ನಿಗದಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಕಿಸಾನ್ ರಥ ಯೋಜನೆಯಲ್ಲಿ 5 ಲಕ್ಷ ಟ್ರಕ್ ಗಳು ಮತ್ತು 20 ಸಾವಿರ ಟ್ರಾಕ್ಟರ್ ಗಳು
ಇನ್ನು ಈ ಮಹತ್ವಾಕಾಂಕ್ಷಿ ಕಿಸಾನ್ ರಥ ಯೋಜನೆಗಾಗಿ ದೇಶಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಟ್ರಕ್ ಗಳು ಮತ್ತು 20 ಸಾವಿರಕ್ಕೂ ಅಧಿಕ ಟ್ರಾಕ್ಟರ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ. ನ್ಯಾಷನಲ್ ಇನ್ ಫಾರ್ಮಟಿಕ್ಸ್ ಸೆಂಟರ್ ಸಂಸ್ಥೆ ಈ ಕಿಸಾನ್ ರಥ ಆ್ಯಪ್ ಅನ್ನು ತಯಾರಿಸಿದ್ದು, ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಮಂಡಿಗೆ, ವ್ಯಾಪಾರಿಗಳಿಗೆ ಮತ್ತು ಗೋದಾಮುಗಳಿಗೆ ರವಾನೆ ಮಾಡಲು ನೆರವಾಗುತ್ತದೆ.
Advertisement