ಮಹಾರಾಷ್ಟ್ರದಿಂದ ಜೈಪುರಕ್ಕೆ ತಲುಪಲು 20 ವರ್ಷದ ಕಾರ್ಮಿಕ 1,700 ಕಿ.ಮೀ ಸೈಕಲ್ ನಲ್ಲಿ ಕ್ರಮಿಸಿದ್ದ ಸುದ್ದಿಯ ನಂತರ ಇಂತಹದ್ದೇ ಮತ್ತೊಂದು ಸುದ್ದಿ ವರದಿಯಾಗಿದೆ.
ಪಾಂಡಿಚೆರಿಯಿಂದ ದೀಪ್ತಿರಾಜನ್, ಗಣೇಶ್ವರ್ ಎಂಬ ಯುವಕರು ತಮ್ಮ ಊರು ತಲುಪಲು ಸೈಕಲ್ ನಲ್ಲಿ 1,500 ಕಿ.ಮೀ ಕ್ರಮಿಸಿದ್ದರು. ಆದರೆ ಇನ್ನೇನು ಊರು ತಲುಪಬೇಕು ಎಂಬಷ್ಟರಲ್ಲಿ ಅವರ ಅದೃಷ್ಟ ಕೈಕೊಟ್ಟಿದ್ದು, ವಿಶಾಖಪಟ್ಟಣಂ ನಲ್ಲಿ ಬಂಧಿಸಿ 14 ದಿನಗಳ ಕಾಲ ಐಸೊಲೇಷನ್ ನಲ್ಲಿರಿಸಲಾಗಿದೆ.
ಎರಡು ಸೈಕಲ್ ಗಳಲ್ಲಿ ಇಬ್ಬರು ಯುವಕರು 1,500 ಕಿ.ಮೀ ದೂರ ಸಂಚರಿಸಿದ್ದರು. ಈ ಇಬ್ಬರು ಯುವಕರು ಪುದುಚೆರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಫೆಬ್ರವರಿಯಲ್ಲಿ ಅಲ್ಲಿಗೆ ತೆರಳಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಅವರು ಊರಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಮನೆಯ ಬಾಡಿಗೆ ನೀಡಲು ಹಣವಿಲ್ಲದೇ ಊರಿಗೆ ತೆರಳಲು ನಿರ್ಧರಿಸಿದ್ದರು. ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಮೂಲಕ ಸಂಚರಿಸಿದ್ದ ಇವರನ್ನು ವಿಶಾಖಪಟ್ಟಣಂ ನಲ್ಲಿ ವಶಕ್ಕೆ ಪಡೆಯಲಾಗಿದೆ.
ಪ್ರತಿ ದಿನ 12-14 ಗಂಟೆಗಳ ಕಾಲ ಸೈಕಲ್ ನಲ್ಲಿ 180-220 ಕಿ.ಮೀ ಕ್ರಮಿಸುತ್ತಿದ್ದರು. ಇನ್ನೊಂದೆರಡು ದಿನಗಳು ಸೈಕಲ್ ನಲ್ಲಿ ಕ್ರಮಿಸಿದ್ದರೆ ಇಬ್ಬರೂ ಊರು ಸೇರಲು ಸಾಧ್ಯವಾಗುತ್ತಿತ್ತು.
Advertisement