ಸಿಹಿ ಸುದ್ದಿ: ಈಶಾನ್ಯ ಭಾರತದ ಐದು ರಾಜ್ಯಗಳು ಕೊರೋನಾ ವೈರಸ್ ಮುಕ್ತ: ಕೇಂದ್ರ ಸರ್ಕಾರ

ಮಹತ್ವದ ಬೆಳವಣಿಗೆಯಲ್ಲಿ ಈಶಾನ್ಯ ಭಾರತದ ಐದು ರಾಜ್ಯಗಳು ಕೊರೋನಾ ವೈರಸ್ ನಿಂದ ಮುಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಅಧಿಕೃತ ಘೋಷಣೆ ಮಾಡಿದೆ.
ಈಶಾನ್ಯ ರಾಜ್ಯಗಳಲ್ಲಿ ಕೊರೋನಾ ಪರೀಕ್ಷೆ
ಈಶಾನ್ಯ ರಾಜ್ಯಗಳಲ್ಲಿ ಕೊರೋನಾ ಪರೀಕ್ಷೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಈಶಾನ್ಯ ಭಾರತದ ಐದು ರಾಜ್ಯಗಳು ಕೊರೋನಾ ವೈರಸ್ ನಿಂದ ಮುಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಅಧಿಕೃತ ಘೋಷಣೆ ಮಾಡಿದೆ.

ಹೌದು.. ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದ್ದು, ಈಶಾನ್ಯ ಭಾರತದ ಒಟ್ಟು 8 ರಾಜ್ಯಗಳ ಪೈಕಿ ಐದು ರಾಜ್ಯಗಳು ಕೊರೋನಾ ವೈರಸ್ ಮುಕ್ತವಾಗಿದೆ. ಇಲ್ಲಿ ಯಾವುದೇ ರೀತಿಯ ಕೊರೋನಾ ವೈರಸ್ ಸೋಂಕು ಕಂಡುಬಂದಿಲ್ಲ. ಅಲ್ಲದೆ ಸೋಂಕು  ಪತ್ತೆಯಾಗಿರುವ ಮೂರು ರಾಜ್ಯಗಳಲ್ಲಿ ಕಳೆದ ಮೂರು ದಿನಗಳಿಂದ ಹೊಸ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. 

ಶಿಲ್ಲಾಂಗ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಈಶಾನ್ಯ ಭಾರತದ ರಾಜ್ಯಗಳ ಕೋವಿಡ್-19 ಸ್ಥಿತಿಗತಿ ವರದಿ ನೀಡಿದ ಜಿತೇಂದ್ರ ಸಿಂಗ್ ಅವರು, ಈಶಾನ್ಯ ಭಾರತದ ಒಟ್ಟು 8 ರಾಜ್ಯಗಳ ಪೈಕಿ 5 ರಾಜ್ಯಗಳು ಕೊರೋನಾ ವೈರಸ್ ಮುಕ್ತವಾಗಿದೆ. ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ  ಪ್ರದೇಶ, ಮಣಿಪುರ ಮತ್ತು ತ್ರಿಪುರಾ ರಾಜ್ಯಗಳು ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿದೆ. ಅಂತೆಯೇ ಪ್ರಸ್ತುತ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿರುವ ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಂ ನಲ್ಲೂ ಕೊರೋನಾ ವೈರಸ್ ಅತ್ಯಂತ ನಿಯಂತ್ರಣದಲ್ಲಿದ್ದು, ಕಳೆದ ಮೂರು  ದಿನಗಳಿಂದ ಈ ರಾಜ್ಯಗಳಲ್ಲಿ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಅಸ್ಸಾಂನಲ್ಲಿ ಈ ವರೆಗೂ 8 ಕೊರೋನಾ ಪ್ರಕರಣಗಳಿದ್ದರೆ, ಮೇಘಾಲಯ 11 ಮತ್ತು ಮಿಜೋರಾಂ ನಲ್ಲಿ ಒಂದು ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ರೋಗಿಗಳೂ ಚಿಕಿತ್ಸೆ  ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗುವ ವಿಶ್ವಾಸವಿದೆ. ಆ ಮೂಲಕ ಈ ಮೂರು ರಾಜ್ಯಗಳೂ ಕೂಡ ಕೊರೋನಾ ವೈರಸ್ ನಿಂದ ಮುಕ್ತವಾಗಲಿವೆ ಎಂದು ಹೇಳಿದ್ದಾರೆ.

ಈಶಾನ್ಯ ಭಾರತದ ರಾಜ್ಯಗಳ ಈ ಸಾಧನೆ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದು, ಇದಕ್ಕಾಗಿ ಇಲ್ಲಿನ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವಾಲಯಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರದೊಂದಿಗೆ ಉತ್ತಮ ರೀತಿಯಲ್ಲಿ ನಿರಂತರ ಸಂಪರ್ಕ ಸಾಧಿಸಿ ವೈರಸ್  ಸೋಂಕನ್ನು ಸಂಪೂರ್ಣ ಹತೋಟಿಗೆ ತಂದಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com