ನವದೆಹಲಿ: ಕೊರೋನಾವೈರಸ್ ನಿಂದ ಗುಣಮುಖರಾಗಿರುವ 10 ಮಂದಿ ತಬ್ಲೀಘಿ ಜಮಾತ್ ಸದಸ್ಯರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ಕೋವಿಡ್-19 ರೋಗಿಗಳಿಗಾಗಿ ಅವರ ರಕ್ತವನ್ನು( ಪ್ಲಾಸ್ಮಾ) ದಾನ ಮಾಡಿದ್ದಾರೆ
ಭಾನುವಾರ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್ (ಐಎಲ್ ಬಿಎಸ್ ) ಸಂಸ್ಥೆಯ ತಂಡ ತಬ್ಲೀಘಿಗಳಿಂದ ರಕ್ತವನ್ನು ಸಂಗ್ರಹಿಸಿದೆ. ನರೇಲಾ ಕ್ವಾರಂಟೈನಲ್ಲಿರುವ ನಾಲ್ವರಿಂದ ಮತ್ತು ಸುಲ್ತಾನ್ ಪುರಿಯಲ್ಲಿನ ಐಸೋಲೇಷನ್ ಸೆಂಟರ್ ನಲ್ಲಿರುವ ಆರು ಮಂದಿಯಿಂದ ರಕ್ತವನ್ನು (ಪ್ಲಾಸ್ಮಾ) ಸಂಗ್ರಹಿಸಲಾಗಿದೆ.
ಐಸೋಲೇಷನ್ ಕೇಂದ್ರದಲ್ಲಿ ಕ್ವಾರಂಟೈನ್ ನಲ್ಲಿರುವ ತಬ್ಲೀಘಿಗಳಿಂದ ರಕ್ತವನ್ನು ಸಂಗ್ರಹಿಸಲು ಮೂರು ತಂಡವನ್ನು ರಚಿಸಲಾಗಿತ್ತು. ಅಗತ್ಯಬಿದ್ದರೆ ದಾನಿಗಳನ್ನು ಐಎಲ್ ಬಿಎಸ್ ಗೆ ಕರೆದೊಯ್ಯಲಾಗುವುದು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ರಂಜನ್ ಮಾಸದ ಹಿನ್ನೆಲೆಯಲ್ಲಿ ದಾನಿಗಳು ಉಪವಾಸದಲ್ಲಿ ನಿರತರಾಗಿದ್ದು, ಉಪವಾಸ ಮುಗಿದ ಬಳಿಕ ಸಂಜೆ ವೇಳೆಯಲ್ಲಿ ಸಂಗ್ರಹ ಪ್ರಕ್ರಿಯೆಯನ್ನು ಆರಂಭಿಸಲಾಗುವುದು, ಇಂದು ನರೇಲಾ ಮತ್ತು ಸುಲ್ತಾನ್ ಪುರಿಯಲ್ಲಿ 40 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಗುವುದು ಎಂದು ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಬ್ಲೀಘಿ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಆಡಿಯೋ ಸಂದೇಶದ ಮೇರೆಗೆ ನವದೆಹಲಿಯ ವಿವಿಧೆಡೆ ಕ್ವಾರಂಟೈನ್ ಸೌಕರ್ಯದಲ್ಲಿರುವ ಸುಮಾರು 200 ಜಮಾತ್ ಸದಸ್ಯರು ರಕ್ತ ದಾನ ಮಾಡಲು ಒಪ್ಪಿಕೊಂಡಿದ್ದಾರೆ.
Advertisement