ಲಕ್ನೋ: ಉತ್ತರ ಪ್ರದೇಶ ಬಿಜೆಪಿ ಶಾಸಕ ಮುಸ್ಲಿಮರಿಂದ ತರಕಾರಿ ಖರೀದಿಸಬೇಡಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ದೇವರಿಯಾ ಜಿಲ್ಲೆಯ ಬರಹಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ತಿವಾರಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಬಿಜೆಪಿ ಶಾಸಕನ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತಿವಾರಿ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮುಸ್ಲಿಂ ಮಾರಾಟಗಾರರು ತರಕಾರಿಗಳ ಮೇಲೆ ಎಂಜಲು ಸವರುತಿದ್ದಾರೆ ಎನ್ನುವ ಕುರಿತು ಪ್ರಸ್ತಾಪಿಸಿದ್ದ ಅವರು ಪರಿಸ್ಥಿತಿ ಒಂದು ಹಂತಕ್ಕೆ ಬರುವವರೆಗೂ ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ. ನಿಮಗೆಲ್ಲಾ ತಿಳಿದೇ ಇದೆ. ಇಡೀ ದೇಶದಲ್ಲಿ ಕೊರೊನಾ ಹರಡಿಸಿದ್ದು ಜಮಾತ್ಗೆ ಹೋಗಿ ಬಂದಿರುವ ಮುಸ್ಲಿಮರು ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಈ ಪ್ರತಿಕ್ರಿಯಿಸಿರುವ ಶಾಸಕರು, ಏಪ್ರಿಲ್ 17ರಂದು ಘಟನೆ ನಡೆದಿದ್ದು, ಸಭೆಯಲ್ಲಿ ನೆರದಿದ್ದವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆ. ಕೆಲ ಮುಸ್ಲಿಮರು ತರಕಾರಿ ಮೇಲೆ ಉಗುಳಿ ಮಾರುತ್ತಿದ್ದಾರೆ ಏನು ಮಾಡೋದು ಎಂದು ಪ್ರಶ್ನಿಸಿದರು. ಆಗ ನಿಮಗೆ ಅವರ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಲ್ಲದಿದ್ರೆ ಅಂತಹವರ ಬಳಿ ತರಕಾರಿ ಖರೀದಿಸೋದು ಬೇಡ ಎಂದು ಹೇಳಿದ್ದೆ ಎಂದಿದ್ದಾರೆ.
ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಅದನ್ನು ಕೇಳುವುದು ಬಿಡುವುದನ್ನು ಜನರೇ ನಿರ್ಧರಿಸಲಿದ್ದಾರೆ. ನಿಜಾಮುದ್ದೀನ್ನ ತಬ್ಲಿಘಿ ಜಮಾತ್ ಸಭೆ ಬಳಿಕ ದೇಶದಲ್ಲಿ ಕೊರೊನಾ ಸೋಂಕುಗಳು ತೀವ್ರ ಹೆಚ್ಚಾಗಿದ್ದನ್ನು ಎಲ್ಲರೂ ನೋಡಿಲ್ಲವೇ ಎಂದೂ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಶ್ ತಿವಾರಿ ಹೇಳಿಕೊಂಡಿದ್ದಾರೆ.
Advertisement