ನವದೆಹಲಿ: "ಇಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರದ 'ಭೂಮಿ ಪೂಜೆ' ಮಾಡುವ ಮೂಲಕ ಕೋಟ್ಯಂತರ ಜನರ ನಂಬಿಕೆಗೆ ಗೌರವ ಸಲ್ಲಿಸಿದ್ದಾರೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶಾ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು "ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣವು ಶತಮಾನಗಳಿಂದಲೂ ವಿಶ್ವದಾದ್ಯಂತ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮ ದೇವಾಲಯ ಭೂಮಿ ಪೂಜೆ ನಡೆಸುವ ಮೂಲಕ ಕೋಟ್ಯಂತರ ಜನರ ನಂಬಿಕೆಗೆ ಗೌರವ ನೀಡುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. " ಎಂದಿದ್ದಾರೆ.
ಹಿಂದಿಯಲ್ಲಿ ಬರೆಯಲಾಗಿರುವ ಟ್ವೀಟ್ ನಲ್ಲಿ "ಇಂದು ಭಾರತಕ್ಕೆ ಒಂದು ಐತಿಹಾಸಿಕ ಮತ್ತು ಹೆಮ್ಮೆಯ ದಿನವಾಗಿದೆ. ಭಗವಾನ್ ಶ್ರೀ ರಾಮನ ಜನ್ಮಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ಬರೆಯಲಿರುವ ಭವ್ಯ ರಾಮ ದೇವಾಲಯದ ಭೂಮಿ ಪೂಜೆಗೆ ಅಡಿಪಾಯ ಹಾಕಿದರು. ಇದರೊಡನೆ ಹೊಸ ಯುಗವೊಂದರ ಪ್ರಾರಂಭವಾಗಿದೆ"ಎಂದು ಅವರು ಹೇಳಿದರು.
ಭಗವಾನ್ ಶ್ರೀ ರಾಮನ ಆದರ್ಶಗಳು ಮತ್ತು ಆಲೋಚನೆಗಳು ಭಾರತದ ಆತ್ಮದಲ್ಲಿ ನೆಲೆಸಿದೆ ಎಂದು ಶಾ ಹೇಳಿದರು."ರಾಮನ ಪಾತ್ರ ಮತ್ತು ಜೀವನದ ತತ್ತ್ವ ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದೆ. ರಾಮ ದೇವಾಲಯದ ನಿರ್ಮಾಣದೊಂದಿಗೆ, ಈ ಮಂಗಳ ಪುಣ್ಯಭೂಮಿ ತನ್ನ ಸಂಪೂರ್ಣ ವೈಭವದಿಂದ ಜಗತ್ತಿನಲ್ಲಿ ಮತ್ತೆ ಕಂಗೊಳಿಸಲಿದೆ. ಧರ್ಮ ಮತ್ತು ಅಭಿವೃದ್ಧಿಯ ಸಮನ್ವಯವು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಶಾ ಟ್ವೀಟ್ ಮಾಡಿದ್ದಾರೆ.
"ಈ ಭವ್ಯ ರಾಮ ದೇವಾಲಯದ ನಿರ್ಮಾಣವು ಪ್ರಧಾನಿ ನರೇಂದ್ರ ಮೋದಿಯವರ ಬಲವಾದ ಮತ್ತು ನಿರ್ಣಾಯಕ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. ಈ ಅವಿಸ್ಮರಣೀಯ ದಿನದಂದು ಎಲ್ಲ ಭಾರತೀಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಭಾರತೀಯ ಸಂಸ್ಕೃತಿ ಮತ್ತು ಅದರ ಮೌಲ್ಯಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಮೋದಿ ಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ"
"ಪ್ರಭು ಶ್ರೀ ರಾಮನ ದೇವಾಲಯದ ನಿರ್ಮಾಣವು ಶತಮಾನಗಳ ನಿರಂತರ ತ್ಯಾಗ, ಹೋರಾಟ, ತಪಸ್ಸು ಮತ್ತು ಅಸಂಖ್ಯಾತ ಜನರ ರಾಮಭಕ್ತರ ತ್ಯಾಗದ ಫಲಿತಾಂಶವಾಗಿದೆ. ಈ ದಿನ, ಸನಾತನ ಸಂಸ್ಕೃತಿಯ ಈ ಅಮೂಲ್ಯ ಪರಂಪರೆಗಾಗಿ ಹೋರಾಡಿದ ಎಲ್ಲ ತಪಸ್ವಿಗಳಿಗೆ ನಾನು ನಮಸ್ಕರಿಸುತ್ತೇನೆ. ಜೈ ಶ್ರೀ ರಾಮ್! " ಶಾ ಮತ್ತೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ 'ಭೂಮಿ ಪೂಜೆ' ನಡೆಸಿದರು.
Advertisement