ಅಯೋಧ್ಯೆ: ರಾಮಮಂದಿರ ಭೂಮಿಪೂಜೆ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಳುಹಿಸಿದ ಪ್ರಸಾದವನ್ನು ದಲಿತ ಕುಟುಂಬವೊಂದು ಮೊದಲು ಪಡೆದಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಲಡ್ಡುಗಳು, ರಾಮಚರಿತ ಮಾನಸದ ಪ್ರತಿ ಮತ್ತು ತುಳಸಿ ಮಾಲೆಯನ್ನು ಪ್ರಸಾದ ಒಳಗೊಂಡಿತ್ತು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಶಾಲಾಬ್ ಮಾಣಿ ತ್ರಿಪಾಠಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿನ ಮಹಾವೀರ ಕುಟುಂಬಕ್ಕೆ ಮೊದಲ ಪ್ರಸಾದವನ್ನು ಕಳುಹಿಸಲಾಗಿದೆ. ಕುಲ್ಲು ಒಡೆಯುವ ಕೆಲಸ ಮಾಡುವ ಮಹಾವೀರ್ ಸುಥತಿಯಲ್ಲಿ ವಾಸಿಸುತ್ತಿದ್ದು, 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮನೆಗೆ ಹೋಗಿದ್ದರು.
ಮಹಾವೀರ್ ಅವರ ಮನೆಯಲ್ಲಿ ಆಹಾರ ಸ್ವೀಕರಿಸಿದ ಯೋಗಿ ಆದಿತ್ಯನಾಥ್ ಆ ಕುಟುಂಬದೊಂದಿಗೆ ಸಂವಾದ ನಡೆಸಿದ್ದರು. ನಂತರ ಆಲಿ ಭಜರಂಗ್ ಬಲಿ ಹೇಳಿಕೆ ನಂತರ ಯೋಗಿ ಆದಿತ್ಯನಾಥ್ ಅವರ 72 ಗಂಟೆಗಳ ಪ್ರಚಾರಾಂದೋಲವನ್ನು ಚುನಾವಣಾ ಆಯೋಗ ನಿಷೇಧಿಸಿತ್ತು.
ರಾಮ ಜನ್ಮಭೂಮಿ ಪ್ರಸಾದದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾವೀರ್, ನಾನು ದಲಿತನಾಗಿದ್ದು, ಮೊದಲ ಪ್ರಸಾದವನ್ನು ನಮ್ಮ ಕುಟುಂಬಕ್ಕೆ ಮುಖ್ಯಮಂತ್ರಿ ಕಳುಹಿಸಿದ್ದಾರೆ. ಅವರು ನನನ್ನು ನೆನಪಿಸಿಕೊಂಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ.ಮೊದಲಿಗೆ ರಾಮ ಮಂದಿರ ನಿರ್ಮಾಣವಾಗಬೇಕೆಂಬ ನಮ್ಮ ಕನಸು ಈಡೇರಿದೆ. ಎರಡನೇಯದು ಪ್ರಸಾದ ಮೊದಲು ಸಿಕ್ಕಿದೆ. ರಾಜ್ಯದಲ್ಲಿ ಜಾತಿ ತಾರತಮ್ಯ ಕೊನೆಯಾಗಿ ಪ್ರತಿಯೊಬ್ಬರು ಎಲ್ಲರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಯೋಚಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಕೋವಿಡ್-19 ನಿರ್ಬಂಧದ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ರಾಮ ಜನ್ಮಭೂಮಿ ತೀರ್ಥಯಾತ್ರೆ ಟ್ರಸ್ಟ್ ಪ್ರಸಾದವನ್ನು ಹಂಚುತ್ತಿದ್ದು, ಮುಖ್ಯಮಂತ್ರಿ ಅವರ ನಿರ್ದೇಶನದ ಮೇರೆಗೆ ಮೊದಲ ಪ್ರಸಾದವನ್ನು ದಲಿತ ಕುಟುಂಬಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement