ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣದಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿದ ತನಿಖೆಗಾಗಿ ರೆಹಾ ಚಕ್ರಬೋರ್ತಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಹಣವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳುವುದಕ್ಕೆ ಮುಂಬೈ ನಲ್ಲಿರುವ ಕಚೇರಿಗೆ ಖುದ್ದಾಗಿ ಹಾಜರಾಗಬೇಕೆಂದು ಎಂದು ತಿಳಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಸುಶಾಂತ್ ನ ಮನೆಯ ಮ್ಯಾನೇಜರ್ ಸ್ಯಾಮ್ಯುಯಲ್ ಮಿರಂಡಾ ಅವರನ್ನು ವಿಚಾರಣೆ ನಡೆಸಿದ್ದರು. ಇ.ಡಿ ವಿಚಾರಣೆ ಮಾಡುತ್ತಿರುವ ಮೂರನೇ ವ್ಯಕ್ತಿ ಈತನಾಗಿದ್ದಾರೆ.
ಮಂಗಳವಾರ ರೆಹಾ ಚಕ್ರಬೋರ್ತಿ ಅವರ ಸಿಎ ರಿತೇಶ್ ಷಾ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು. ಸೋಮವಾರ ಸುಶಾಂತ್ ಸಿಂಗ್ ನ ಸಿಎ ಸಂದೀಪ್ ಶ್ರೀಧರ್ ಅವರನ್ನೂ ವಿಚಾರಣೆಗೊಳಪಡಿಸಲಾಗಿತ್ತು.
15 ಕೋಟಿ ರೂಪಾಯಿ ಹಣದ ವಹಿವಾಟು ಹಾಗೂ ಸುಶಾಂತ್ ಸಿಂಗ್ ನ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ನ ತಂದೆ ಕೆಕೆ ಸಿಂಗ್ ಪಾಟ್ನಾದಲ್ಲಿ ರೆಹಾ ಚಕ್ರಬೋರ್ತಿ ವಿರುದ್ಧ ದೂರು ದಾಖಲಿಸಿ, ತಮ್ಮ ಮಗನಿಗೆ ಈಕೆ ಮೋಸ ಮಾಡಿ ವಂಚಿಸುತ್ತಿದ್ದಲ್ಲದೇ ತಮ್ಮ ಕುಟುಂಬದಿಂದಲೂ ಮಗನನ್ನು ದೂರ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಆಧಾರದಲ್ಲಿ ಇ.ಡಿ ತನಿಖೆ ಕೈಗೊಂಡಿದೆ.
Advertisement