ಜೈ ಶ್ರೀರಾಮ್ ಎನ್ನದ ಮುಸ್ಲಿಂ ಆಟೋ ಚಾಲಕನನ್ನು ಥಳಿಸಿ, ಹಲ್ಲು ಮುರಿದ ದುಷ್ಕರ್ಮಿಗಳು

ಭಯಾನಕ ಘಟನೆಯೊಂದರಲ್ಲಿ ಮುಸ್ಲಿಂ ಆಟೋ ಚಾಲಕರೊಬ್ಬರನ್ನು ಇಬ್ಬರು ವ್ಯಕ್ತಿಗಳು ಮನಬಂದಂತೆ ಥಳಿಸಿದ್ದು, ಜೈ ಶ್ರೀ ರಾಮ್ ಮತ್ತು ಮೋದಿ ಜಿಂದಾಬಾದ್ ಎಂದು ಕೂಗುವಂತೆ ಬಲವಂತಪಡಿಸಿರುವ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ  ನಡೆದಿದೆ.
ಹಲ್ಲೆಗೊಳಗಾದ ಮುಸ್ಲಿಂ ಆಟೋ ಚಾಲಕ
ಹಲ್ಲೆಗೊಳಗಾದ ಮುಸ್ಲಿಂ ಆಟೋ ಚಾಲಕ

ಜೈಪುರ: ಭಯಾನಕ ಘಟನೆಯೊಂದರಲ್ಲಿ ಮುಸ್ಲಿಂ ಆಟೋ ಚಾಲಕರೊಬ್ಬರನ್ನು ಇಬ್ಬರು ವ್ಯಕ್ತಿಗಳು ಮನಬಂದಂತೆ ಥಳಿಸಿದ್ದು, ಜೈ ಶ್ರೀ ರಾಮ್ ಮತ್ತು ಮೋದಿ ಜಿಂದಾಬಾದ್ ಎಂದು ಕೂಗುವಂತೆ ಬಲವಂತಪಡಿಸಿರುವ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ  ನಡೆದಿದೆ.

ದುಷ್ಕರ್ಮಿಗಳು ಚಾಲಕನ ಗಡ್ಡವನ್ನು ಎಳೆದು, ಮುಖಕ್ಕೆ ಹೊಡೆದಿದ್ದಾರೆ. ಹಲ್ಲುಗಳು ಹೊರಗೆ ಬರುವಂತೆ ಹಲ್ಲೆ ನಡೆಸಲಾಗಿದೆ. ಪಾಕಿಸ್ತಾನಕ್ಕೆ ಹೋಗುವಂತೆ ಪೀಡಿಸಲಾಗಿದೆ. ಹಲ್ಲೆಯ ನಂತರ 52 ವರ್ಷದ ಗಫಾರ್ ಅಹ್ಮದ್ ಅವರ ಕಣ್ಣು ಮತ್ತು ಕೆನ್ನೆಗಳು ಉಬ್ಬಿಕೊಂಡಿವೆ.

ಕೆಲ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ತಲುಪಿಸಿ ಮರಳುವಾಗ ಈ ಘಟನೆ ನಡೆದಿದೆ. ಹಲ್ಲೆ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಗಫಾರ್ ಅಹ್ಮದ್ ತಿಳಿಸಿದ್ದಾರೆ.

ಕೆಲ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ತಲುಪಿಸಿ ಮರಳುತ್ತಿರುವಾಗ ತಮ್ಮನ್ನು ತಡೆದ ವ್ಯಕ್ತಿಗಳು ತಂಬಾಕು ಕೇಳಿದ್ದಾರೆ. ಅದನ್ನು ಕೊಟ್ಟಾಗ ಮೋದಿ ಜಿಂದಾಬಾದ್ ಎಂದು ಹೇಳುವಂತೆ ಸೂಚಿಸಿದ್ದಾರೆ. ಅದನ್ನು ಹೇಳದಿದ್ದಾಗ ಕಪ್ಪಾಳಕ್ಕೆ ಹೊಡೆದಿದ್ದು, ಜೈ ಶ್ರೀರಾಮ್ ಎನ್ನುವಂತೆ ಪೀಡಿಸಿದ್ದಾರೆ. ಇದಕ್ಕೂ ಒಪ್ಪದಿದ್ದಾಗ ಬರ್ಬರ ರೀತಿಯಲ್ಲಿ ಹಲ್ಲೆ ನಡೆಸಲಾಗಿದೆ. 2-3 ಹಲ್ಲುಗಳು ಕಿತ್ತು ಬಂದಿವೆ. ಎಡಕಣ್ಣಿಗೂ ತೀವ್ರ ರೀತಿಯ ಗಾಯವಾಗಿದೆ. ಕೆಲ ಕಾಲ ಪ್ರಜ್ಞೆ ಹೀನನಾಗಿ ಬಿದಿದ್ದು, ನಂತರ ಮನೆಗೆ ವಾಪಸ್ಸಾಗಿರುವುದಾಗಿ
ಅವರು ಎಫ್ ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಐಪಿಸಿ ಸೆಕ್ಷನ್ 323, 341, 295ಎ, 504, 506, 327, 382 ಮತ್ತು 34ರ ಅಡಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್ ಐಆರ್ ದಾಖಲಿಸಿದ ಬಳಿಕ ರಾಜೇಂದ್ರ ಜಾಟ್ ಮತ್ತು ಶಂಬು ದಯಾಳ್ ಜಾಟ್ ಎಂಬವರನ್ನು ಬಂಧಿಸಲಾಗಿದೆ. ಇಬ್ಬರೂ ಚಾಲಕರಾಗಿದ್ದು, ವ್ಯವಸಾಯ ಕೂಡಾ ಮಾಡಲಿದ್ದಾರೆ ಎಂದು ಸಿಕರ್ ನ ಸಾದರ್ ಪೊಲೀಸ್ ಠಾಣಾಧಿಕಾರಿ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com