ಸುಶಾಂತ್ ಸಿಂಗ್ ರಜಪೂತ್ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು: ಮೂವರ ವಿರುದ್ಧ ದೂರು ದಾಖಲಿಸಿದ ತಂದೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಶರಣಾಗಿದ್ದ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.
ದಿಶಾ ಸಾಲಿಯಾನ್
ದಿಶಾ ಸಾಲಿಯಾನ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಶರಣಾಗಿದ್ದ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ.

ದಿಶಾ ಸಾಲಿಯಾನ್ ಅವರ ತಂದೆ ಸತೀಶ್ ಸಾಲಿಯಾನ್ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ದೂರಿನಲ್ಲಿ ಉಲ್ಲೇಖಿಸಿರುವಂತೆ ಪುನೀತ್ ವಶಿಷ್ಠಾ, ಸಂದೀಪ್ ಮಲಾನಿ ಹಾಗೂ ನಮನ್ ಶರ್ಮಾ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.  ಈ ಮೂವರು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಮತ್ತು ಊಹಾಪೋಹದ ಸುದ್ದಿ ಹಾಕುವ ಮೂಲಕ ತಮ್ಮನ್ನು ತೇಜೋವಧೆ ಮಾಡಿದ್ದಾರೆ ಎಂದು ಸತೀಶ್ ಸಾಲಿಯಾನ್ ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ದಿಶಾ ಸಾಲಿಯಾನ್ ಸಾವಿನ ವಿಚಾರದಲ್ಲಿಯೂ ಸಂಬಂಧ ಕಲ್ಪಿಸಿ ಹಲವಾರು ವಾಟ್ಸಪ್ ಫಾರ್ವರ್ಡ್ ಸಂದೇಶ, ಸಂಚಿನ ಕಪೋಲ ಕಲ್ಪಿತ ಕಥೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಸುದ್ದಿಯನ್ನು ಹರಿಬಿಡುತ್ತಿದ್ದಾರೆ. ಹಲವಾರು ರಾಜಕಾರಣಿಗಳು ಕೂಡಾ ಸುಶಾಂತ್ ಸಿಂಗ್ ರಜಪೂತ್ ಮತ್ತು ದಿಶಾ ಸಾಲಿಯಾನ್ ಸಾವಿನ ಪ್ರಕರಣದ ಬಗ್ಗೆ ಸಂಬಂಧ ಕಲ್ಪಿಸಿ ಆರೋಪಿಸುತ್ತಿದ್ದಾರೆ  ಎಂದು ದಿಶಾ ತಂದೆ ಸತೀಶ್ ಸಾಲಿಯಾನ್ ಆರೋಪಿಸಿದ್ದಾರೆ. ಮುಂಬೈನ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿರುವುದಾಗಿ ಸತೀಶ್ ಸಾಲಿಯಾನ್ ತಿಳಿಸಿದ್ದಾರೆ. 

ಬಳಿಕ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳಿಂದ ತಮಗಾದ ಮಾನಸಿಕ ಹಿಂಸೆಯ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದೇನೆ. ಈ ಮೂವರು ಬೇಕಾಬಿಟ್ಟಿ ಸುಳ್ಳು ಕಥೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಸತೀಶ್ ಅವರ ದೂರು ದಾಖಲಿಸಿಕೊಂಡ ಪೊಲೀಸರು, ಶೀಘ್ರದಲ್ಲಿಯೇ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೂಲತ. ಉಡುಪಿ‌ ಜಿಲ್ಲೆಯವರಾದ ದಿಶಾ ಸಾಲ್ಯಾನ್ ಬೆಳೆದಿದ್ದು ಮುಂಬೈನಲ್ಲಿ. ತಮ್ಮ ತಂದೆ ತಾಯಿಯೊಂದಿಗೆ ಅಲ್ಲೇ ನೆಲೆ ನಿಂತಿದ್ದರು. ತನ್ನ ವಿದ್ಯಾಭ್ಯಾಸದ ಬಳಿಕ ಸ್ಥಳೀಯ ಸುದ್ದಿ ವಾಹಿನಿ, ಪತ್ರಿಕೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ದಿಶಾ ಸುಶಾಂತ್‌ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಜೂನ್ 8  ರಂದು  ‌ಆಕೆ ಮುಂಬಯಿಯ ಮಲಾಡ್ನ್ ನಲ್ಲಿರುವ ತನ್ನ ಗೆಳೆಯನ 14 ಮಹಡಿಯಲ್ಲಿರುವ ಫ್ಲಾಟ್ ನಿಂದ ಬಿದ್ದು ಸಾವನ್ನಪ್ಪಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ನಾರಾಯಣ್ ರಾಣೆ ಅವರು ದಿಶಾ ಅವರದ್ದು ಆತ್ಮಹತ್ಯೆಯಲ್ಲ, ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com