ವಕೀಲ ಪ್ರಶಾಂತ್ ಭೂಷಣ್ ಗೆ ಸುಪ್ರೀಂ ಕೋರ್ಟ್ ಯಾವ ಶಿಕ್ಷೆ ವಿಧಿಸಬಹುದು?

ಪರಶಿವ ತನ್ನ ಮೂರನೇ ಕಣ್ಣು ತೆರದರೂ ತಪ್ಪು ತಪ್ಪೇ ಎಂಬಂತೆ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ತಮ್ಮ ವಿರುದ್ಧ ದಾಖಲಾಗಿರುವ ‘ನ್ಯಾಯಾಲಯ ನಿಂದನೆ ’ ಪ್ರಕರಣದಲ್ಲಿ ಬಹುತೇಕ ಇದೇ ಅರ್ಥದಲ್ಲಿ ವಾದ ಮಂಡಿಸಿದ್ದಾರೆ.
ಪ್ರಶಾಂತ್ ಭೂಷಣ್
ಪ್ರಶಾಂತ್ ಭೂಷಣ್

ನವದೆಹಲಿ: ಪರಶಿವ ತನ್ನ ಮೂರನೇ ಕಣ್ಣು ತೆರದರೂ ತಪ್ಪು ತಪ್ಪೇ ಎಂಬಂತೆ ವಕೀಲ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ತಮ್ಮ ವಿರುದ್ಧ ದಾಖಲಾಗಿರುವ ‘ನ್ಯಾಯಾಲಯ ನಿಂದನೆ ’ ಪ್ರಕರಣದಲ್ಲಿ ಬಹುತೇಕ ಇದೇ ಅರ್ಥದಲ್ಲಿ ವಾದ ಮಂಡಿಸಿದ್ದಾರೆ.

“ನ್ಯಾಯಾಂಗ ನಿಂದನೆ ಎಸಗಿದ್ದೀರಿ ನಿಮಗೆ ಶಿಕ್ಷೆಯಾಗಲಿದೆ” ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದರೂ, ಪ್ರಶಾಂತ್ ಭೂಷಣ್ ತಮ್ಮ ನಿಲುವಿಗೆ ಬದ್ದವಾಗಿ ಉಳಿಸಿಕೊಂಡಿದ್ದಾರೆ. ನ್ಯಾಯಾಲಯ ವಿರುದ್ದ ತಾನು ನೀಡಿರುವ ಹೇಳಿಕೆಗಳನ್ನು ಹಿಂಪಡೆಯುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ. ದೇಶದ  ಅತ್ಯುನ್ನತ ನ್ಯಾಯ ವ್ಯವಸ್ಥೆಯ ಕಾರ್ಯಕ್ಷಮತೆ, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯ ಮೂರ್ತಿಗಳು ನೀಡಿರುವ ತೀರ್ಪುಗಳಿಗೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಮಾಡಿರುವ ಎರಡು ಟ್ವೀಟ್‌ಗಳು ವಿವಾದಾಸ್ಪದವಾಗಿದ್ದು, ಇವುಗಳ ಬಗ್ಗೆ ಸುಪ್ರೀಂ ಕೋರ್ಟ್ ತಾನಾಗಿಯೇ ನ್ಯಾಯಾಂಗ ನಿಂದನೆ ಪ್ರಕರಣ  ದಾಖಲಿಸಿಕೊಂಡು. ಪ್ರಶಾಂತ್ ಭೂಷಣ್ ತಪ್ಪಿತಸ್ಥ ಎಂದು ಕಳೆದ ವಾರ ತೀರ್ಪು ನೀಡಿದೆ. ಅವರಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣ ನಿಗದಿಪಡಿಸುವ ವೇಳೆ ಕ್ಷಮಾಪಣೆಗೆ ಅವಕಾಶ ಕಲ್ಪಿಸಿದರೂ, ಭೂಷಣ್ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಈಗ, ನ್ಯಾಯಾಲಯ ಅವರಿಗೆ ಯಾವ ಶಿಕ್ಷೆ ವಿಧಿಸಿದರೂ, ಅದು ಅವರ  ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ನ್ಯಾಯಾಲಯದ ಕಾರ್ಯಕ್ಷಮತೆ, ನ್ಯಾಯಮೂರ್ತಿಗಳ ನಡವಳಿಕೆ ಟೀಕಿಸಿ ಪ್ರಶಾಂತ್ ಭೂಷಣ್ ಮಾಡಿರುವ ಟ್ವೀಟ್‌ಗಳು ಅಸ್ಪಷ್ಟವಾಗಿವೆ. ಆದರೆ ತಮ್ಮ ವಿರುದ್ಧ ದಾಖಲಾದ ನ್ಯಾಯಾಲಯ ನಿಂದನೆ ಪ್ರಕರಣಕ್ಕೆ ಉತ್ತರವಾಗಿ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ, ನ್ಯಾಯಾಲಯ ನಡೆವಳಿಕೆಯನ್ನು ಆಮೂಲಾಗ್ರವಾಗಿ  ವಿವರಿಸಿದ್ದಾರೆ, ವಿವಾದಾತ್ಮಕ ಪೌರತ್ವ ಮಸೂದೆ, ಜಮ್ಮು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ ರದ್ದುಪಡಿಸುವ ವಿಧೇಯಕ, ಕಾಶ್ಮೀರದಲ್ಲಿ ನಾಗರಿಕ ಹಕ್ಕುಗಳ ಮರುಸ್ಥಾಪನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯ ನಿಭಾಯಿಸಿದ ರೀತಿಯನ್ನು ಅವರು ಪ್ರಸ್ತಾಪಿಸಿದ್ದಾರೆ. ಅಯೋಧ್ಯೆ-ರಾಮ ಜನ್ಮಭೂಮಿ  ಪ್ರಕರಣದಲ್ಲಿ ನಿವೃತ್ತ ಸಿಜೆಐ ಗೊಗೊಯ್ ಅವರ ತೀರ್ಪನ್ನು ಸಹ ಅವರು ಬಿಟ್ಟಿಲ್ಲ
.
ಇದಲ್ಲದೆ, ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯ ವ್ಯವಹರಿಸಿದ ರೀತಿ, ಗೊಗೊಯ್ ನಿವೃತ್ತಿಯ ನಂತರ ಪ್ರಕರಣ ದಾಖಲಿಸಿದ್ದ ಮಹಿಳೆಗೆ ಮತ್ತೆ ಅದೇ ಹುದ್ದೆ ನ್ಯಾಯಾಲಯ ನೀಡಿದ್ದರ ಪರಿಣಾಮಗಳ ಬಗ್ಗೆ  ಭೂಷಣ್ ಸಾಧ್ಯಂತವಾಗಿ ವಿವರಿದ್ದಾರೆ. ಪ್ರಶಾಂತ್ ಭೂಷಣ್ ಅವರು ಬಿರ್ಲಾ-ಸಹಾರಾ ಪ್ರಕರಣದಿಂದ ಹಿಡಿದು ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಲಿಖೋಪಾಲ್ ಆತ್ಮಹತ್ಯೆ ನೋಟ್ ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ಎಲ್ಲವನ್ನೂ ಉಲ್ಲೇಖಿಸಿದ್ದಾರೆ.  ಮಾಜಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಕೇಂದ್ರ ಸರ್ಕಾರ ತಡೆದ ವ್ಯವಹಾರವನ್ನು ಅವರು ಉಲ್ಲೇಖಿಸಿದ್ದಾರೆ. ಅವರು ಪ್ರಮುಖವಾಗಿ ನಾಲ್ವರು ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ದೇಶದ ಸಂವಿಧಾನದಡಿಯಲ್ಲಿ ದೇಶದ ಜನರಿಗೆ  ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಅನೇಕ ಸಂದರ್ಭಗಳಲ್ಲಿ ಪದೇ ಪದೇ ತೀರ್ಪು ನೀಡಿರುವ ನಮ್ಮ ನ್ಯಾಯಾಂಗ ತನ್ನದೇ ಪ್ರಕರಣದಲ್ಲಿ ನಿಂದನೆ ಎಂದು ಏಕೆ ಹೇಳುತ್ತದೆ ಎಂದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com