ನವದೆಹಲಿ: ಭಾರತ ದೇಶವನ್ನು ಬಿಜೆಪಿ ಪಕ್ಷ ಹಿಂದೂ ರಾಷ್ಟ್ರವಾಗಿ ಪರಿವರ್ತಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಫಾರಿನ್ ಕರೆಸ್ಪಾಂಡೆನ್ಸ್ ಕ್ಲಬ್ ಆಯೋಜಿಸಿರುವ ವೆಬಿನಾರ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಭಾರತ ದೇಶವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುತ್ತಿಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶವೂ ಇಲ್ಲ. ಆದರೆ ಹಿಂದುತ್ವ ಸಿದ್ಧಾಂತ ಅಸ್ತಿತ್ವದಲ್ಲಿರುವವರೆಗೆ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂದು ಸ್ವಾಮಿ ಹೇಳಿದ್ದಾರೆ.
ಈ ವೆಬಿನಾರ್ನಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕೂಡ ಭಾಗವಹಿಸಿದ್ದರು. ಎಂದಿನಂತೆ ತಮ್ಮ ನೇರ ಮಾತುಗಳಿಂದ ಅಭಿಪ್ರಾಯ ವ್ಯಕ್ತಪಡಿಸಿದ ಸ್ವಾಮಿ, ಈ ಹಿಂದೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಹಿಂದೂಗಳನ್ನು ವಿಭಜಿಸುವ ಮೂಲಕ ಸರ್ಕಾರ ರಚಿಸಿತ್ತು. ಹಿಂದೂಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮರೆತು ರಾಜಕೀಯವಾಗಿ ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು.
ಅಲ್ಲದೇ, ಹಲವಾರು ವರ್ಷಗಳಿಂದ ಹಿಂದೂಗಳನ್ನು ವಿಭಜಿಸಿ ಅಲ್ಪಸಂಖ್ಯಾತರನ್ನು ಒಂದಗೂಡಿಸಿ ಮತ್ತೆ ಮತ್ತೆ ಸರ್ಕಾರ ರಚಿಸುತ್ತಿತ್ತು. ಆರ್ಯರು, ದ್ರಾವಿಡರು, ಜಾತಿ ಸೇರಿದಂತೆ ಇನ್ನಿತರ ಇತಿಹಾಸದ ಬೋಗಸ್ ವಿಚಾರಗಳನ್ನು ಮುಂದಿಟ್ಟುಕೊಂಡು ಹಿಂದೂಗಳನ್ನು ಕಾಂಗ್ರೆಸ್ ವಿಭಜಿಸಿದೆ. ಹೀಗಾಗಿ ಬಿಜೆಪಿಯ ಮತಹಂಚಿಕೆ ಪ್ರಮಾಣ ಹೆಚ್ಚಾಗಲು ಹಿಂದುತ್ವ ಸಿದ್ಧಾಂತವೇ ಕಾರಣ ಎಂದು ತಿಳಿಸಿದ್ದಾರೆ.
Advertisement