ರೈತರು ಕರೆ ನೀಡಿರುವ 'ಭಾರತ್ ಬಂದ್'ಗೆ ಎಡಪಕ್ಷಗಳ ಬೆಂಬಲ
ನವದೆಹಲಿ: ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಡಿಸೆಂಬರ್ 8 ರಂದು ರೈತರು ಕರೆ ನೀಡಿರುವ ‘ಭಾರತ್ ಬಂದ್’ ಎಡಪಕ್ಷಗಳ ಬೆಂಬಲ ನೀಡಿದ್ದು, ಬಂದ್ ಯಶಸ್ವಿಯಾಗಿಸುವಂತೆ ಐದು ಎಡಪಂಥೀಯ ಪಕ್ಷಗಳು, ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳಿಗೆ ಕರೆ ನೀಡಿವೆ.
ಭಾರತೀಯ ಕಮ್ಯುನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಕಮ್ಯುನಿಷ್ಟ್ ಪಕ್ಷ –ಮಾರ್ಕ್ಸ್ ವಾದಿ(ಸಿಪಿಎಂ), ಸಿಪಿಐ(ಎಂಎಲ್), ಫಾರ್ವರ್ಡ್ ಬ್ಲಾಕ್ ಮತ್ತು ಅಖಿಲ ಭಾರತ ಸಮಾಜವಾದಿ ಪಕ್ಷ ಇಂದು ಜಂಟಿ ಪ್ರಕಟಣೆ ನೀಡಿದ್ದು, ಎಲ್ಲಾ ಆಕ್ಷೇಪಾರ್ಹ ಟೀಕೆಗಳನ್ನು ಖಂಡಿಸಿವೆ.
ಕಳೆದ ಕೆಲ ದಿನಗಳಿಂದ ರೈತ ಚಳವಳಿಯ ವಿರುದ್ಧ ಕೆಟ್ಟ ರೀತಿಯ ಪ್ರಚಾರವನ್ನು ನಡೆಸಲಾಗುತ್ತಿದೆ ಎಂದು ಎಡ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಮೂರು ಹೊಸ ಕೃಷಿ ಸುಧಾರಣಾ ಕಾನೂನುಗಳು ಮತ್ತು ಉದ್ದೇಶಿತ ವಿದ್ಯುತ್ ಮಸೂದೆಯನ್ನು ರೈತರು ವಿರೋಧಿಸಿ ಕಳೆದ ಹಲವಾರು ದಿನಗಳಿಂದ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪರವಾಗಿ ಎಡಪಕ್ಷಗಳು ನಿಲ್ಲಲಿದ್ದು, ಸಂಪೂರ್ಣ ಬೆಂಬಲ ನೀಡಲಿವೆ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಡಪಕ್ಷಗಳು ಸಹ 'ಭಾರತ್ ಬಂದ್' ಬೆಂಬಲಿಸಲಿದ್ದು, ಇತರ ಎಲ್ಲಾ ರಾಜಕೀಯ ಪಕ್ಷಗಳು ಸಹ ಬಂದ್ ಬೆಂಬಲಿಸುವಂತೆ ಮನವಿ ಮಾಡಲಾಗಿದೆ.
ಈ ಹೇಳಿಕೆಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಸಿಪಿಐ (ಎಂಎಲ್) ನ ದೀಪಂಕರ್ ಭಟ್ಟಾಚಾರ್ಯ, ಫಾರ್ವರ್ಡ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದೇವಬ್ರತಾ ಬಿಸ್ವಾಸ್ ಮತ್ತು ಆರ್ಎಸ್ಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಭಟ್ಟಾಚಾರ್ಯ ಸಹಿ ಮಾಡಿದ್ದಾರೆ.