ನವದೆಹಲಿ/ಚಂಡೀಗಢ: ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮಣಿಯದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ನಾಳೆ ಡಿಸೆಂಬರ್ 9ರಂದು ರೈತಪರ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ಮಧ್ಯೆ 6ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅದು ವಿಫಲವಾದರೆ ಕಠಿಣ ಹೆಜ್ಜೆ ಮುಂದಿಡಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.
ಹಾಗಾದರೆ ಏನು ಕಠಿಣ ನಿರ್ಧಾರ?: ನಾಳೆಯ ಮಾತುಕತೆ ವಿಫಲವಾದರೆ ಮತ್ತೆ ಸರ್ಕಾರದ ಜೊತೆ ಯಾವುದೇ ಮಾತುಕತೆ, ಸಭೆ ನಡೆಸದೇ ಇರಲು ರೈತಪರ ಸಂಘಟನೆಗಳು ನಿರ್ಧರಿಸಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸರ್ಕಾರ ಮಸೂದೆಯನ್ನು ಹಿಂಪಡೆಯಲು ತಯಾರಿದ್ದರೆ ನಮಗೆ ಪ್ರಸ್ತಾವನೆ ಕಳುಹಿಸಲಿ. ಅಲ್ಲಿಯವರೆಗೆ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಅಶೋಕ್ ಧವಲೆ ತಿಳಿಸಿದ್ದಾರೆ.
ಕಾನೂನಿನಲ್ಲಿ ತಿದ್ದುಪಡಿ ಮಾಡಲು ಸಲ್ಲಿಸಿರುವ ಪ್ರಸ್ತಾವನೆಯ ಕರಡು ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಕಳುಹಿಸುವುದಿಲ್ಲ ಎಂದು ರೈತರು ಆಲೋಚಿಸಿದ ನಂತರ ಈ ಕಠಿಣ ನಿರ್ಧಾರಕ್ಕೆ ಬಂದಿರುವ ರೈತಪರ ಸಂಘಟನೆಗಳು ಸರ್ಕಾರದಿಂದ ಇದುವರೆಗೆ ಯಾವುದೇ ಘೋಷಣೆ ಬಾರದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಠಿಣವಾಗಲು ನಿರ್ಧರಿಸಿದ್ದೇವೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಸದಸ್ಯೆ ಕವಿತಾ ಕುರುಗಂಟಿ ಹೇಳಿದ್ದಾರೆ.
ನಾಳೆಯ ಮಾತುಕತೆಗೆ ಮುನ್ನ ಸರ್ಕಾರದ ಪ್ರಸ್ತಾವನೆಯನ್ನು ಅಧ್ಯಯನ ಮಾಡಿ ಚರ್ಚಿಸಲು ರೈತರು ನಿರ್ಧರಿಸಿದ್ದಾರೆ ಎಂದು ಸಹ ತಿಳಿದುಬಂದಿದೆ.
ಕೇಂದ್ರದಿಂದ ಸಲಹೆ ಹೊರಡಿಕೆ: ಭಾರತ ಬಂದ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಗಳನ್ನು ಹೊರಡಿಸಿ ಭದ್ರತೆ ಕ್ರಮಗಳನ್ನು ಹೆಚ್ಚಿಸುವಂತೆ ಸೂಚಿಸಿದೆ.
ಇಂದಿನ ಬೆಳವಣಿಗೆ: ತೆಲಂಗಾಣ ರಾಜ್ಯದಲ್ಲಿ ರಾಜ್ಯ ರಸ್ತೆ ಸಾರಿಗೆ ನೌಕರರು ಕಾಮರೆಡ್ಡಿಯಲ್ಲಿ ಭಾರತ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಜದಬ್ಪುರ ರೈಲ್ವೆ ನಿಲ್ದಾಣ ಕೋಲ್ಕತ್ತಾದಲ್ಲಿ ರೈಲ್ವೆ ಹಳಿ ಮೇಲೆ ನಿಂತು ರೈಲುಗಳ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ಭಾರತ ಬಂದ್ ಹಿನ್ನೆಲೆಯಲ್ಲಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಎಡಪಕ್ಷಗಳು ವಿಶಾಖಪಟ್ನಂ ಜಿಲ್ಲೆಯ ಪಾರ್ವತಿಪುರಂನಲ್ಲಿ ಭಾರತ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ದೆಹಲಿಯ ಸ್ಥಿತಿಗತಿ: ತೀವ್ರ ಚಳಿ, ಗಾಳಿ ಮಧ್ಯೆಯೇ ಹರ್ಯಾಣ-ದೆಹಲಿ ಗಡಿಯ ಸಿಂಘು ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು 13ನೇ ದಿನಕ್ಕೆ ಕಾಲಿಟ್ಟಿದೆ.
Advertisement