ನೆರೆಯ ಆಂಧ್ರದಲ್ಲಿ ನಿಗೂಢ ಕಾಯಿಲೆ: ರೋಗಿಗಳ ರಕ್ತದ ಮಾದರಿಗಳಲ್ಲಿ ನಿಕ್ಕಲ್, ಸೀಸದ ಅಂಶ ಪತ್ತೆ

ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ವ್ಯಾಪ್ತಿಯಲ್ಲಿ ನಿಗೂಢ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಮಂಗಳವಾರವೂ ಹೆಚ್ಚುತ್ತಲೇ ಇದ್ದರೂ, ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆರೆಯ ಆಂಧ್ರದಲ್ಲಿ ನಿಗೂಢ ಕಾಯಿಲೆ: ರೋಗಿಗಳ ರಕ್ತದ ಮಾದರಿಗಳಲ್ಲಿ ನಿಕ್ಕಲ್, ಸೀಸದ ಅಂಶ ಪತ್ತೆ

ವಿಜಯವಾಡ: ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ವ್ಯಾಪ್ತಿಯಲ್ಲಿ ನಿಗೂಢ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಮಂಗಳವಾರವೂ ಹೆಚ್ಚುತ್ತಲೇ ಇದ್ದರೂ, ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ವೇಳೆಗೆ ಪ್ರಕರಣಗಳ ಸಂಖ್ಯೆ 505ಕ್ಕೆ ತಲುಪಿದೆ. ಆದರೆ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 332 ಆಗಿದೆ. ಭಾನುವಾರ ಸಂಜೆ ನಿಧನರಾದ ವಿದ್ಯಾನಗರದ 45 ವರ್ಷದ ಶ್ರೀಧರ್ ಹೊರತುಪಡಿಸಿ ಯಾವುದೇ ಸಾವುನೋವು ಸಂಭವಿಸಿಲ್ಲ. ಏತನ್ಮಧ್ಯೆ, ದೆಹಲಿಯ ಏಮ್ಸ್ ಗೆ ಕಳುಹಿಸಲಾದ ರಕ್ತದ ಮಾದರಿಗಳ ಮೇಲೆ ನಡೆಸಿದ ಪರೀಕ್ಷೆಗಳಲ್ಲಿ ನಿಕ್ಕಲ್ ಹಾಗೂ ಸೀಸದ ಅಂಶಗಳಿರುವುದುಬಹಿರಂಗಗೊಂಡಿದೆ, ಇದು ನೀರು ಅಥವಾ ಹಾಲಿನ ಸೇವನೆಯ ಮೂಲಕ ರೋಗಿಗಳ ದೇಹಕ್ಕೆ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

"ಆ ಎರಡು ಲೋಹಗಳ ಅಂಶ ನಾವು ದೆಹಲಿಯ ಏಮ್ಸ್ ಗೆ ಕಳುಹಿಸಿದ ರಕ್ತದ ಮಾದರಿಗಳಲ್ಲಿ ಪತ್ತೆಯಾಗಿದೆ. ಈ ಎರಡೂ ಲೋಹಗಳ ಅಂಶ ಸಾಮಾನ್ಯಕ್ಕಿಂತ ಹೆಚ್ಚಾಗಿವೆ. ಸೀಸವು ನ್ಯೂರೋಟಾಕ್ಸಿನ್ ಆಗಿದ್ದು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಒಂದು ತೀರ್ಮಾನಕ್ಕೆ ಬರಲು ಇದಿನ್ನೂ ಸಾಧ್ಯವಾಗುವುದಿಲ್ಲ, ಏಮ್ಸ್ ನ ವಿನಂತಿಯಂತೆ ನಾವು ಇನ್ನೂ 40 ಹಾಲು, ನೀರಿನ ಮಾದರಿಗಳನ್ನು ಕಳುಹಿಸಿದ್ದೇವೆ ಮತ್ತು ವರದಿಯನ್ನು ಪಡೆದ ನಂತರ, ನಿಗೂಢ ಕಾಯಿಲೆ ಕಾರಣವನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗಬಹುದು ”ಎಂದು ಎಲೂರು ಸರ್ಕಾರಿ ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ವಿ.ಮೋಹನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಆದರೆ ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. "ಪ್ರಸ್ತುತ ನಾವು ಇನ್ನೂ 30 ರೋಗಿಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದೇವೆ ಮತ್ತು ಆಸ್ಪತ್ರೆಯಲ್ಲಿರುವವರ ಮತ್ತು ಬಿಡುಗಡೆಯಾದವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಅವರು ವಿವರಿಸಿದರು.

ಏತನ್ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್) ನ ತಜ್ಞ ತಂಡಗಳು ಸಾಮುದಾಯಿಕ ಸಮೀಕ್ಷೆಗಳನ್ನು ನಡೆಸುತ್ತಿದೆ. ಅವರು ವಿವಿಧ ಪ್ರದೇಶಗಳಿಂದ ನೀರು ಮತ್ತು ಹಾಲಿನ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ,ಚಿಕಿತ್ಸೆಗೆ ಒಳಪಡುವ ರೋಗಿಗಳು ಮತ್ತು ಬಿಡುಗಡೆಯಾದ ರೋಗಿಗಳಿಂದ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಹ ಸಂಗ್ರಹಿಸಲಾಗಿದೆ. ಎನ್ಐಎನ್ ತನ್ನ ಸಂಶೋಧನೆಗಳನ್ನು ಶುಕ್ರವಾರದೊಳಗೆ ಬಹಿರಂಗಪಡಿಸುವ ಸಾಧ್ಯತೆಯಿದೆ.

ಎನ್‌ಐಎನ್‌ನ ಒಂಬತ್ತು ಸದಸ್ಯರ ತಂಡದ ನೇತೃತ್ವ ವಹಿಸಿದ್ದ ಡಾ.ಜೆ.ಜೆ.ಬಾಬು ಅವರ ಪ್ರಕಾರ, ತಲೆಸುತ್ತು, ಕೆಲವು ಸಂದರ್ಭಗಳಲ್ಲಿ ತಲೆನೋವು ಮತ್ತು ವಾಕರಿಕೆ ರೋಗಿಗಳು ವರದಿ ಮಾಡಿದ ಲಕ್ಷಣಗಳಾಗಿವೆ. “ವೈದ್ಯಕೀಯ ಚಿಕಿತ್ಸೆಗೆ ಶೀಘ್ರ ಸ್ಪಂದನೆ ಸಿಕ್ಕಿದೆ. ಒಮ್ಮೆ ನಾವು ಲ್ಯಾಬ್ ಪರೀಕ್ಷೆಗಳನ್ನು ಮಾಡಿದರೆ, ಕಾರಣವನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ, ” ಮತ್ತೊಂದೆಡೆ, ಸಿಸಿಎಂಬಿ, ಐಸಿಎಂಆರ್ ಮತ್ತು ಇತರ ಸಂಸ್ಥೆಗಳಿಗೆ ಕಳುಹಿಸಲಾದ ಮಾದರಿಗಳ ಫಲಿತಾಂಶಗಳನ್ನು ಮಂಗಳವಾರ ರಾತ್ರಿಯ ವೇಳೆಗೆ ನಿರೀಕ್ಷಿಸಲಾಗಿದೆ.

ಎಲೂರಿನ ಸಮಸ್ಯೆಯ ಸಂಬಂಧ ಸೂಕ್ಷ್ಮವಾಗಿ ಗಮನಿಸುತ್ತಿರುವ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಎಲೂರಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅವರಿಗೆ ತಿಳಿಸಲಾಗಿದೆ. . ಐಐಸಿಟಿ ಮತ್ತು ಇತರ ಲ್ಯಾಬ್‌ಗಳ ವರದಿಗಳನ್ನೂ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com