ಕೋವಿಡ್ ಹಿನ್ನೆಲೆ: 2 ವಾರಗಳ ಕಾಲ ಗುರುವಾಯೂರ್ ಕೃಷ್ಣನ ದರ್ಶನಕ್ಕೆ ಬ್ರೇಕ್

ವಿಶ್ವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯಕ್ಕೆ ಶನಿವಾರದಿಂದ ಎರಡು ವಾರಗಳವರೆಗೆ ಭಕ್ತರಿಗೆ ನಿರ್ಬಂಧ ಹೇರಲಾಗುತ್ತಿದೆ. ಏಕೆಂದರೆ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ತ್ರಿಶೂರ್ ಜಿಲ್ಲಾಡಳಿತವು ಕೋವಿಡ್-19 ಬಾಧಿತ ವಲಯವೆಂದು ಘೋಷಿಸಿದೆ.
ಗುರುವಾಯೂರ್ ದೇವಾಲಯ
ಗುರುವಾಯೂರ್ ದೇವಾಲಯ

ತ್ರಿಶೂರ್: ವಿಶ್ವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯಕ್ಕೆ ಶನಿವಾರದಿಂದ ಎರಡು ವಾರಗಳವರೆಗೆ ಭಕ್ತರಿಗೆ ನಿರ್ಬಂಧ ಹೇರಲಾಗುತ್ತಿದೆ. ಏಕೆಂದರೆ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ತ್ರಿಶೂರ್ ಜಿಲ್ಲಾಡಳಿತವು ಕೋವಿಡ್-19 ಬಾಧಿತ ವಲಯವೆಂದು ಘೋಷಿಸಿದೆ.

ಶುಕ್ರವಾರ ನಡೆದ ಗುರುವಾಯೂರ್ ದೇವಸ್ವಂ ಆಡಳಿತ ಸಮಿತಿಯ ತುರ್ತು ಸಭೆಯಲ್ಲಿ ಶನಿವಾರದಿಂದ ಎರಡು ವಾರ ಕಾಲ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಾಲಯದ ಮೂಲಗಳ ಪ್ರಕಾರ, ಆಲಯದ 22 ಉದ್ಯೋಗಿಗಳು ಶುಕ್ರವಾರ ಸೋಂಕಿಗೆ ಪಾಸಿಟಿವ್ ವರದಿ ಪಡೆದಿದ್ದಾರೆ.

ಗುರುವಾಯೂರ್ ಇರುವ ತ್ರಿಶೂರ್ ಜಿಲ್ಲೆಯಲ್ಲಿ ಶುಕ್ರವಾರ 272 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಗುರುವಾರ 393 ಪ್ರಕರಣಗಳು ವರದಿಯಾಗಿವೆ.

ಸಾರ್ವಜನಿಕ ದರ್ಶನ ನಿರ್ಬಂಧಿಸುವ ನಿರ್ಧಾರವನ್ನು ಪ್ರಕಟಿಸಿದ ದೇವಸ್ವಂ ಪತ್ರಿಕಾ ಪ್ರಕಟಣೆಯಲ್ಲಿ ಎಂದಿನಂತೆ ದೇವಾಲಯ ಸಂಕೀರ್ಣದಲ್ಲಿ ಎಲ್ಲಾ ನಿಯಮಿತ ಪೂಜೆಗಳು ಮತ್ತು ಮೂಲ ವಿಧಿಗಳನ್ನು ನೆರವೇರಿಸಲಾಗುವುದು. ಡಿಸೆಂಬರ್ 12 ರಿಂದ ವರ್ಚುವಲ್ ಕ್ಯೂ ಮತ್ತು ನೇರ ದರ್ಶನ ಮತ್ತು ಸಮೀಪದ ದೀಪಸ್ಥಂಭ ದರ್ಶನ, ತುಲಾಭಾರ ಹಾಗೂ ಇನ್ನಿತರೆ ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶನಿವಾರ ನಿಗದಿಯಾಗಿರುವ ಮದುವೆಗಾಗಿ ಈಗಾಗಲೇ ದೇವಸ್ಥಾನವನ್ನು ತಲುಪಿದ ಕುಟುಂಬದವರಿಗೆ ಕಟ್ಟುನಿಟ್ಟಾದ ಕೋವಿಡ್ ಪ್ರೊಟೋಕಾಲ್‌ಗೆ ಅನುಸಾರವಾಗಿ ಸಮಾರಂಭವನ್ನು ನಡೆಸಲು ಅವಕಾಶ ನೀಡಲಾಗುವುದು. ಆದರೆ, ಶನಿವಾರದ ನಂತರ, ಎರಡು ವಾರಗಳವರೆಗೆ ಯಾವುದೇ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಮೂರು ದಿನಗಳಲ್ಲಿ ಎಲ್ಲಾ ದೇವಸ್ವಂ ಅಧಿಕಾರಿಗಳನ್ನು ಪ್ರತಿಜನಕ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ನಂತರದಲ್ಲಿ ಇಂತಹಾ ಪರೀಕ್ಷೆಗಳು ತಿಂಗಳಿಗೊಮ್ಮೆ ನಡೆಯಲಿದೆ. ಗುರುವಾಯೂರ್ ದೇವಸ್ವಂನ ಒಟ್ಟು 153 ಉದ್ಯೋಗಿಗಳು ಶುಕ್ರವಾರ ಪ್ರತಿಜನಕ ಪರೀಕ್ಷೆಯನ್ನು ತೆಗೆದುಕೊಂಡರು ಮತ್ತು ಅವರಲ್ಲಿ 22 ಮಂದಿ ವೈರಲ್ ಸೋಂಕಿಗೆ ಪಾಸಿಟಿವ್ ವರದಿ ಪಡೆದಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರನ್ನು ಆಕರ್ಷಿಸುವ ಭಗವಾನ್ ಕೃಷ್ಣ ದೇವಸ್ಥಾನವನ್ನು ಈ ಹಿಂದೆ ರಾಷ್ಟ್ರವ್ಯಾಪಿ ಲಾಕ್ ಡೌನ್ ಆದಾಗ ಮಾರ್ಚ್ 24 ರಂದು ಮೊದಲ ಬಾರಿಗೆ ಮುಚ್ಚಲಾಗಿತ್ತು. ಇದನ್ನು ಜೂನ್‌ನಲ್ಲಿ ಐದು ದಿನಗಳವರೆಗೆ ಪುನಃ ತೆರೆಯಲಾಯಿತು ಆದರೆ ಆಗ ತ್ರಿಶೂರ್ ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಕಾರಣ ಮತ್ತೆ ಮುಚ್ಚಲಾಯಿತು. ದರ್ಶನಕ್ಕಾಗಿ ಆನ್‌ಲೈನ್ ನೋಂದಣಿಯ ನಂತರ ಸೆಪ್ಟೆಂಬರ್ 10 ರಿಂದ ಕಟ್ಟುನಿಟ್ಟಾದ ಕೋವಿಡ್ -19 ಪ್ರೋಟೋಕಾಲ್‌ನೊಂದಿಗೆ ಭಕ್ತರಿಗೆ ಅವಕಾಶ ನೀಡಲಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com