ತೋಮರ್ ಭೇಟಿಯಾದ ನಂತರ ನೂತನ ಕೃಷಿ ಕಾನೂನುಗಳನ್ನು ಬೆಂಬಲಿಸಿದ ರೈತರ ಮತ್ತೊಂದು ನಿಯೋಗ!
ಕೇಂದ್ರದ ನೂತನ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಂತೆ, ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಸಿಸಿ) ನೇತೃತ್ವದ ರೈತರ ಮತ್ತೊಂದು ನಿಯೋಗ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಸೋಮವಾರ ಭೇಟಿಯಾಗಿ ವಿವಾದಾತ್ಮಕ ಶಾಸನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿತು
Published: 14th December 2020 08:11 PM | Last Updated: 14th December 2020 08:11 PM | A+A A-

ರೈತರ ನಿಯೋಗ
ನವದೆಹಲಿ: ಕೇಂದ್ರದ ನೂತನ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಂತೆ, ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿ (ಎಐಕೆಸಿಸಿ) ನೇತೃತ್ವದ ರೈತರ ಮತ್ತೊಂದು ನಿಯೋಗ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಸೋಮವಾರ ಭೇಟಿಯಾಗಿ ವಿವಾದಾತ್ಮಕ ಶಾಸನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿತು. ಕಳೆದ ಎರಡು ವಾರಗಳಲ್ಲಿ ನೂತನ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿದ ನಾಲ್ಕನೇ ಗುಂಪು ಇದಾಗಿದೆ.
28 ರಾಜ್ಯಗಳಲ್ಲಿ ಪ್ರತಿನಿಧಿಸುವ ಎಐಕೆಸಿಸಿ ಪ್ರಧಾನ ಕಾರ್ಯದರ್ಶಿ ಗುಣವತ್ ಪಾಟೀಲ್ ಹಂಗರ್ಗೆಕರ್ ನೇತೃತ್ವದ ನಿಯೋಗ ಕೆಲವು ತಿದ್ದುಪಡಿಗಳೊಂದಿಗೆ ನೂತನ ಕೃಷಿ ಕಾನೂನುಗಳನ್ನು ಮುಂದುವರೆಸುವಂತೆ ಕೋರಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ಹಲವು ವರ್ಷಗಳ ಹೋರಾಟ ನಂತರ ಈ ಕಾನೂನುಗಳನ್ನು ನೋಡುವಂತಾಗಿದೆ. ಕೆಲ ಶಕ್ತಿಗಳು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಹಾದಿ ತಪ್ಪಿಸುತ್ತಿರುವ ಬಗ್ಗೆ ನಮಗೆ ಅರಿವಿದೆ. ಅಂತಹ ಶಕ್ತಿಗಳು ದೇಶಾದ್ಯಂತ ರೈತರಿಗೆ ನೀಡಿರುವ ಕಾನೂನುಗಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ನಾವು ಬಯಸುವುದಿಲ್ಲ ಎಂದು ಸಭೆಯ ಬಳಿಕ ಪಾಟೀಲ್ ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ರೈತರ ಹಿತಾಸಕ್ತಿ ಕಾಪಾಡಲು ವಿವಾದಿತ ನಿರ್ಣಯಗಳಿಗೆ ಕೆಲ ತಿದ್ದುಪಡಿಗಳು ಅಗತ್ಯವಾಗಿದೆ. ಉಳಿದಂತೆ ಸಾಮಾನ್ಯವಾಗಿ ಕಾನೂನುಗಳು ರೈತರ ಪರವಾಗಿವೆ. ಒಂದು ವೇಳೆ ಒಪ್ಪಂದಗಳು ಇಬ್ಬರ ನಡುವೆ ಉಲ್ಲಂಘನೆಯಾದ್ದಲ್ಲಿ ನಿರ್ಣಯಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸಲು ನ್ಯಾಯಮಂಡಳಿ ಸ್ಥಾಪಿಸಬೇಕೆಂದು ಬಯಸುವುದಾಗಿ ಅವರು ತಿಳಿಸಿದರು.