ಹೈದರಾಬಾದ್ ಬಳಿ ಕಾರು ಅಪಘಾತ: ಹಿಮಾಚಲ ಪ್ರದೇಶ ರಾಜ್ಯಪಾಲ ಅಪಾಯದಿಂದ ಪಾರು
ಹೈದರಾಬಾದ್: ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಹೈದರಾಬಾದ್ ಬಳಿ ಅಪಘಾತಕ್ಕೀಡಾಯಿತು. ಅದೃಷ್ಟವಶಾತ್ ಯಾರಿಗೆ ಯಾವ ಅಪಾಯವಾಗದೆ ಪಾರಾಗಿದ್ದಾರೆ.
ಕಾರು ಚಾಲಕನು ವಾಹನದ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿಯಾಗಿದೆ.
ಹೈದರಾಬಾದ್-ವಿಜಯವಾಡ ಹೆದ್ದಾರಿಯ ಚೌತುಪ್ಪಲ್ ಮಂಡಲದ ಕೈತಪುರಂ ಬಳಿ ಅಪಘಾತ ಸಂಭವಿಸಿದೆ. ಈ ವೇಳೆ ಹಿಮಾಚಲ ಪ್ರದೇಶ ರಾಜ್ಯಪಾಲರು ಹೈದರಾಬಾದ್ ನಿಂದ ನಲ್ಗೊಂಡಕ್ಕೆ ತೆರಳುತ್ತಿದ್ದರು.
ಅಪಘಾತದಿಂದ ಕಾರು ಜಖಂ ಆಗಿದ್ದು ಆ ಘಟನಾ ನಂತರ ರಾಜ್ಯಪಾಲರು ಮತ್ತೊಂದು ವಾಹನದಲ್ಲಿ ನಲ್ಗೊಂಡಕ್ಕೆ ತೆರಳಿದ್ದಾರೆ ಎಂದು ರಾಜ್ಯಪಾಲರ ಸಹಾಯಕ ಕೈಲಾಶ್ ನಾಗೇಶ್ ಐಎಎನ್ಎಸ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಒದಗಿಸಿದ ವಾಹನ ಸುಸ್ಥಿತಿಯಲ್ಲಿರಲಿಲ್ಲ ಎಂದು ನಾಗೇಶ್ ಹೇಳಿದರು. ಹೈದರಾಬಾದ್ ಮೂಲದವರಾದ ರಾಜ್ಯಪಾಲ ಬಂಡಾರು ದತ್ತಾತ್ರೇಯ ನಲ್ಗೊಂಡದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳುತ್ತಿದ್ದರು.