ಗುವಾಹಟಿ: ಅಸ್ಸಾಂ ನಲ್ಲಿ ಆರ್ ಎಸ್ಎಸ್ ನ ಸಹ ಸಂಘಟನೆಯಾಗಿರುವ ಕೃಷಿ ವಿಭಾಗದ ಭಾರತೀಯ ಕಿಸಾನ್ ಸಂಘ್ (ಬಿಕೆಎಸ್) ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ನೀಡುವ ಕಾನೂನು ಜಾರಿಗೆ ತರಬೇಕೆಂಬ ಬೇಡಿಕೆ ಮುಂದಿಟ್ಟು ಬಿಕೆಎಸ್ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದೆ.
ಬಿಜೆಪಿಯನ್ನು ಬೆಂಬಲಿಸುವ ಸಂಘ, ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನನ್ನು ಹಿಂಪಡೆಯುವುದರತ್ತ ಒಲವು ತೋರದೇ ಇದ್ದರೂ ಎಂಎಸ್ ಪಿ ಹಾಗೂ ಖರೀದಿ ಸಂಸ್ಥೆಗಳಿಂದ ರೈತರಿಗೆ ಬ್ಯಾಂಕ್ ಖಾತ್ರಿಯನ್ನು ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಒತ್ತಾಯಿಸುತ್ತಿದೆ.
ಈಗ ರೈತರ ಪ್ರತಿಭಟನೆಗೆ ಬಗ್ಗಿರುವ ಕೇಂದ್ರ ಸರ್ಕಾರ ಕೆಲವು ಬದಲಾವಣೆಗಳನ್ನು ಮಾಡಲು ಒಪ್ಪಿಗೆ ಸೂಚಿಸಿದೆಯಾದರೂ ದೊಡ್ಡ ಕಾರ್ಪೊರೇಟ್ ಗಳು ಹಾಗೂ ವ್ಯಾಪಾರಿಗಳಿಂದ ರೈತರಿಗೆ ಅಪಾಯ ಎದುರಾಗಂತೆ ಬ್ಯಾಂಕ್ ಸುರಕ್ಷತೆ ಹಾಗೂ ಎಂಎಸ್ ಪಿ ಜಾರಿಗೆ ತರಲೇಬೇಕೆಂದು ಅಸ್ಸಾಂ ಬಿಕೆಎಸ್ ನ ಸಂಘಟನಾ ಕಾರ್ಯದರ್ಶಿ ಕೃಷ್ಣ ಕಾಂತ್ ಬೋರಾ ಹೇಳಿದ್ದಾರೆ.
ಕಂಪನಿಗಳು ರೈತರಿಗೆ ಭರವಸೆ ನೀಡುವ ಮೊತ್ತವನ್ನು ಪಾವತಿ ಮಾಡದೇ ಇದ್ದಲ್ಲಿ ಸರ್ಕಾರ ಅದನ್ನು ರೈತರಿಗೆ ಸಿಗುವಂತೆ ವಸೂಲಿ ಮಾಡುವುದಕ್ಕೆ ಕಂಪನಿಗಳಿಂದ ಬ್ಯಾಂಕ್ ಭದ್ರತೆಯನ್ನು ಒದಗಿಸಬೇಕು, ಖರೀದಿದಾರರ ಬಗ್ಗೆ ರೈತರಿಗೆ ಮಾಹಿತಿ ನೀಡುವ ಡಾಟಾ ಪೋರ್ಟಲ್ ಜಾರಿಗೆ ಬರಬೇಕೆಂದು ಬೋರಾ ಆಗ್ರಹಿಸಿದ್ದಾರೆ.
Advertisement