ಪಲಕ್ಕಾಡ್: ಇತ್ತೀಚಿಗೆ ನಡೆದ ಪಾಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಪುರಸಭೆ ಕಚೇರಿ ಮೇಲೆ ಜೈ ಶ್ರೀ ರಾಮ್' ಮತ್ತು 'ವಂದೇ ಮಾತರಂ' ಎಂಬ ಘೋಷಣೆ ಇರುವ ಎರಡು ಬ್ಯಾನರ್ ಗಳನ್ನು ಹಾಕಿದ್ದ ಆರೋಪದ ಮೇರೆಗೆ ಕೆಲ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಪುರಸಭೆ ಕಾರ್ಯದರ್ಶಿ ದೂರು ದಾಖಲಿಸಿದ ನಂತರ ಕೇಸ್ ನ್ನು ದಾಖಲಿಸಲಾಗಿದೆ. ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ಸಂಜೆ ಪುರಸಭೆ ಎದುರು ನಡೆದ ವಿಜಯೋತ್ಸವದ ಸಂದರ್ಭದಲ್ಲಿ, ಪುರಸಭೆ ಕಟ್ಟಡ ಮೇಲೆ ಮಲಯಾಳಂನಲ್ಲಿ ಬರೆದ 'ಜೈ ಶ್ರೀ ರಾಮ್' ಮತ್ತು ಕಟ್ಟಡದ ಮೇಲ್ಬಾಗದಲ್ಲಿ ಹಾಕಲಾದ ಛತ್ರಪತಿ ಶಿವಾಜಿ ಮಹಾರಾಜ್ ಅವರ ಬೃಹತ್ ಚಿತ್ರದೊಂದಿಗೆ ಕೆಲ ಬಿಜೆಪಿ ಕಾರ್ಯಕರ್ತರು ಇರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇರುವ ಮತ್ತೊಂದು ಬ್ಯಾನರ್ ವೊಂದನ್ನು ಸಹ ಅನಾವರಣಗೊಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ವಿಶೇಷ ವಿಭಾಗದ ಉಪ ಮಹಾನಿರ್ದೇಶಕರು ಸೂಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ದಾಸ್ ಎಸ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಇತ್ತೀಚಿಗೆ ನಡೆದ ಪುರಸಭೆ ಚುನಾವಣೆಯಲ್ಲಿ 52 ವಾರ್ಡ್ ಗಳ ಪೈಕಿಯಲ್ಲಿ 28 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
Advertisement