ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಶಾಸಕರು ಮುಖಂಡರ ಪಕ್ಷಾಂತರ ಪರ್ವ ಮುಂದುವರೆದಿರುವಂತೆಯೇ ಇತ್ತ ತೃಣಮೂಲ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ಓರ್ವ ಶಾಸಕ ಪಕ್ಷ ತೊರೆದ 24 ಗಂಟೆಗಳ ಅವಧಿಯಲ್ಲೇ ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದಾರೆ.
ಹೌದು.. ತೃಣಮೂಲ ಕಾಂಗ್ರೆಸ್ ಪಕ್ಷದ ಪಾಂಡವೇಶ್ವರ ಕ್ಷೇತ್ರದ ಶಾಸಕ ಜಿತೇಂದ್ರ ತಿವಾರಿ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ 24 ಗಂಟೆಗಳ ಅವಧಿಯಲ್ಲೇ ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಹಿಂದೆ ಅಸನ್ಸೋಲ್ ಮುನಿಸಿಪಲ್ ಕಾರ್ಪೊರೇಷನ್ನ ಮುಖ್ಯಸ್ಥರ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದ ತಿವಾರಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಪ್ರಹಸನ ನಡೆದ 24 ಗಂಟೆಗಳೊಳಗೇ ತಿವಾರಿ ಟಿಎಂಸಿಗೆ ವಾಪಸ್ ಆಗಿದ್ದಾರೆ.
ಶುಕ್ರವಾರ ಟಿಎಂಸಿಯ ಹಿರಿಯ ನಾಯಕ ಅರುಪ್ ಬಿಸ್ವಾಸ್ ಮತ್ತು ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಅವರನ್ನು ದಕ್ಷಿಣ ಕೋಲ್ಕತಾದ ಸುರುಚಿ ಸಂಘ ಕ್ಲಬ್ ನಲ್ಲಿ ಭೇಟಿ ಮಾಡಿದ ತಿವಾರಿ, ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ಹಾಗೂ ತಮ್ಮ ದುಡುಕಿನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, 'ನಾನು ತಪ್ಪು ಮಾಡಿದ್ದೇನೆ. ಕೆಲವು ತಪ್ಪು ತಿಳಿವಳಿಕೆಗಳು ಉಂಟಾಗಿದ್ದವು. ನಾನು ಹೇಳಿದ್ದೆಲ್ಲವೂ ನನ್ನ ಕಡೆಯಿಂದ ನಡೆದ ಪ್ರಮಾದ. ನನ್ನ ನಡೆಯಿಂದ ದೀದಿ ಮಮತಾ ಬ್ಯಾನರ್ಜಿ ಅವರಿಗೆ ನೋವಾಗಿದೆ. ದೀದಿ ಅವರಿಗೆ ಘಾಸಿಯುಂಟು ಮಾಡುವ ಯಾವುದೇ ಕೆಲಸವನ್ನು ನಾನು ಮಾಡಲಾರೆ. ನಾನು ಖುದ್ದಾಗಿ ಮಮತಾ ದೀದಿ ಅವರನ್ನು ಭೇಟಿ ಮಾಡಿ ಅವರ ಕ್ಷಮೆ ಕೋರುತ್ತೇನೆ. ನಾನು ತೃಣಮೂಲ ಕಾಂಗ್ರೆಸ್ನಲ್ಲಿಯೇ ಕೆಲಸ ಮುಂದುವರಿಸುತ್ತೇನೆ ಎಂದು ಜಿತೇಂದ್ರ ತಿವಾರಿ ಅವರು ಹಿರಿಯ ಮುಖಂಡರ ಜತೆಗಿನ ಸಭೆಯ ಬಳಿಕ ತಿಳಿಸಿದ್ದಾರೆ.
ಇನ್ನು ಬಳಿಕ ಮಾತನಾಡಿದ ಟಿಎಂಸಿಯ ಹಿರಿಯ ನಾಯಕ ಅರುಪ್ ಬಿಸ್ವಾಸ್ ಅವರು, ಜಿತೇಂದ್ರ ತಿವಾರಿ ಅವರು ಈ ಮೊದಲು, ಈಗ ಮತ್ತು ಮುಂದೆ ಕೂಡ ತೃಣಮೂಲ ಕಾಂಗ್ರೆಸ್ನಲ್ಲಿ ಇರಲಿದ್ದಾರೆ. ಮಮತಾ ಬ್ಯಾನರ್ಜಿ ಅವರ ನಿಷ್ಠಾವಂತ ಸೈನಿಕನಂತೆ ಬಿಜೆಪಿ ವಿರುದ್ಧ ಹೋರಾಡಲಿದ್ದಾರೆ. ಎಲ್ಲ ಕುಟುಂಬಗಳಲ್ಲಿಯೂ ಸಮಸ್ಯೆಗಳಿರುತ್ತವೆ. ಆದರೆ ಅವುಗಳನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.
ಸುವೇಂದು ಅಧಿಕಾರಿ, ಬನಶ್ರೀ ಮೈತಿ, ಸಿಲ್ಭದ್ರಾ ದತ್ತಾ ಮತ್ತು ಜಿತೇಂದ್ರ ತಿವಾರಿ ಸೇರಿದಂತೆ ಟಿಎಂಸಿಯ ಒಟ್ಟು ನಾಲ್ವರು ಶಾಸಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕೂಡ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
Advertisement