ಸರ್ಕಾರದ ಪತ್ರದಲ್ಲಿ ಹೊಸತೇನೂ ಇಲ್ಲ, ನಾವು ಮಾತುಕತೆಗೆ ಸಿದ್ಧ, ಕೇಂದ್ರ ನಿರ್ದಿಷ್ಟ ಪರಿಹಾರ ನೀಡಬೇಕು: ರೈತ ಮುಖಂಡರು

ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಕೋರಿ ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ಹೊಸತೇನೂ ಇಲ್ಲ. ನಾವು ಮಾತುಕತೆಗೆ ಯಾವಾಗಲೂ ಸಿದ್ಧರಿದ್ದೇವೆ. ಆದರೆ ಸರ್ಕಾರ ನಿರ್ದಿಷ್ಟ ಪರಿಹಾರ ನೀಡಬೇಕು..
ರೈತರು ಪ್ರಧಾನಿ ಮೋದಿಗೆ ರಕ್ತದಲ್ಲಿ ಬರೆದ ಪತ್ರ
ರೈತರು ಪ್ರಧಾನಿ ಮೋದಿಗೆ ರಕ್ತದಲ್ಲಿ ಬರೆದ ಪತ್ರ

ನವದೆಹಲಿ: ಮುಂದಿನ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿ ಕೋರಿ ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ಹೊಸತೇನೂ ಇಲ್ಲ. ನಾವು ಮಾತುಕತೆಗೆ ಯಾವಾಗಲೂ ಸಿದ್ಧರಿದ್ದೇವೆ. ಆದರೆ ಸರ್ಕಾರ ನಿರ್ದಿಷ್ಟ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಸೋಮವಾರ ಹೇಳಿದ್ದಾರೆ.

ಹೊಸ ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಹಿಂದಿನ ಪ್ರಸ್ತಾಪದ ಬಗ್ಗೆ ಮಾತುಕತೆ ನಡೆಸಲು ಸರ್ಕಾರ ಬಯಸಿದೆ ಎಂದು ಕೇಂದ್ರ ತನ್ನ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕೈಟ್ ಅವರು ತಿಳಿಸಿದ್ದಾರೆ.

"ನಾವು ಈ ವಿಷಯದ ಬಗ್ಗೆ(ಸರ್ಕಾರದ ಪ್ರಸ್ತಾಪ) ಈ ಮುಂಚೆ ಅವರೊಂದಿಗೆ ಮಾತನಾಡಿಲ್ಲ. ಪ್ರಸ್ತುತ ನಾವು ಸರ್ಕಾರದ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಚರ್ಚಿಸುತ್ತಿದ್ದೇವೆ" ಎಂದು ಟಿಕೈಟ್ ಪಿಟಿಐಗೆ ತಿಳಿಸಿದ್ದಾರೆ.

ರೈತರೊಂದಿಗೆ ಡಿಸೆಂಬರ್ 9ರಂದು ನಿಗದಿಯಾಗಿದ್ದ 6ನೇ ಸುತ್ತಿನ ಮಾತುಕತೆ ರದ್ದಾಗಿತ್ತು. ಈಗ ಕೇಂದ್ರ ಸರ್ಕಾರ ಮತ್ತೆ ಮಾತುಕತೆಗೆ ಆಹ್ವಾನಿಸಿ 40 ರೈತ ಮುಖಂಡರಿಗೆ ಪತ್ರ ಬರೆದಿದೆ. 

ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಅವರು ರೈತರ ಮುಖಂಡರಿಗೆ ಪತ್ರ ಬರೆದಿದ್ದು, ಕೃಷಿ ಕಾನೂನುಗಳಲ್ಲಿ ತಿದ್ದುಪಡಿ ಮಾಡುವ ಪ್ರಸ್ತಾಪದ ಬಗ್ಗೆ ತಮ್ಮ ಕಾಳಜಿ ನಿರ್ದಿಷ್ಟಪಡಿಸುವಂತೆ ಮತ್ತು ಮುಂದಿನ ಸುತ್ತಿನ ಮಾತುಕತೆಗೆ ಅನುಕೂಲಕರ ದಿನಾಂಕವನ್ನು ನಿಗದಿಪಡಿಸುವಂತೆ ಕೇಳಿಕೊಂಡಿದ್ದಾರೆ.

"ಈ ಪತ್ರದಲ್ಲಿ ಹೊಸದೇನೂ ಇಲ್ಲ. ಹೊಸ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ನಾವು ಈಗಾಗಲೇ ತಿರಸ್ಕರಿಸಿದ್ದೇವೆ. ಪತ್ರದಲ್ಲಿ ಸರ್ಕಾರ ತನ್ನ ಪ್ರಸ್ತಾವನೆಯನ್ನು ಚರ್ಚಿಸಲು ಮತ್ತೊಂದು ಸುತ್ತಿನ ಮಾತುಕತೆಗೆ ದಿನಾಂಕ ತಿಳಿಸುವಂತೆ ಕೇಳಿದೆ ಎಂದು ಮತ್ತೊಬ್ಬ ರೈತ ಮುಖಂಡ ಅಭಿಮನ್ಯು ಕೊಹಾರ್ ಅವರು ಹೇಳಿದ್ದಾರೆ.

ನಮ್ಮ ಬೇಡಿಕೆ ಏನು ಅಂತ ಅವರಿಗೆ ಗೊತ್ತಿಲ್ಲವೇ? ಹೊಸ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂಬುದು ನಮ್ಮ ಬೇಡಿಕೆ" ಎಂದು ಅಭಿಮನ್ಯು ಕೊಹಾರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com