ಕೋಲ್ಕತಾ: ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಳ್ಳು ಹೇಳುತ್ತಿದ್ದಾರೆ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯದ ಸ್ಥಾನದ ಕುರಿತು ಅವರು ನೀಡಿದ ಅಂಕಿಅಂಶ ಸುಳ್ಳಿನ ಕಸ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, "ನಾನು ಅಮಿತ್-ಜಿ ಅವರಿಗೆ ಹೇಳಲು ಬಯಸುತ್ತೇನೆ. ನೀವು ಕೇಂದ್ರ ಗೃಹ ಸಚಿವರು. ನಿಮ್ಮ ಪಕ್ಷದ ಕಾರ್ಯಕರ್ತರು ಒದಗಿಸಿದ ಸುಳ್ಳನ್ನು ಪರಿಶೀಲಿಸದೆ ಬಹಿರಂಗವಾಗಿ ಹೇಳುವುದು ಸರಿಯಲ್ಲ" ಎಂದಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಾನು ಇಂದು ಎರಡು ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತೇನೆ, ನಾಳೆ ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ. ನಾವು ಉದ್ಯಮದಲ್ಲಿ ಶೂನ್ಯ ಎಂದು ಅವರು ಹೇಳಿದ್ದಾರೆ. ಆದರೆ ಸಣ್ಣ ಕೈಗಾರಿಕೋದ್ಯಮದಲ್ಲಿ ಪಶ್ಚಿಮ ಬಂಗಾಳ ಪ್ರಥಮ ಸ್ಥಾನದಲ್ಲಿದೆ. ಮತ್ತೊಂದು ವಿಚಾರ ಎಂದರೆ, ನಾವು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿಲ್ಲ ಎಂದು ಹೇಳಿದ್ದಾರೆ. ಆದರೆ ಗ್ರಾಮೀಣ ರಸ್ತೆ ನಿರ್ಮಾಣದಲ್ಲಿ ನಾವೇ ನಂಬರ್ ಒನ್ ಎಂದು ಕೇಂದ್ರ ಸರ್ಕಾರವೇ ಹೇಳಿದೆ ಎಂದರು.
ಇದೇ ವೇಳೆ ಅಧಿಕೃತ ಸಭೆಗಾಗಿ ಡಿಸೆಂಬರ್ 28 ರಂದು ಬಿರ್ಭಮ್ ಜಿಲ್ಲೆಗೆ ಭೇಟಿ ನೀಡುವುದಾಗಿ ಮತ್ತು ಮರುದಿನ ರೋಡ್ ಶೋ ನಡೆಸುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Advertisement