ನೋಯ್ಡಾ: ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಯೂನಿಯನ್ (ಲೋಕಶಕ್ತಿ)ಮುಖ್ಯಸ್ಥ ಶಿಯೋರಾಜ್ ಸಿಂಗ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಉತ್ತರ ಭಾರತದ ಹಲವು ರೈತ ಸಂಘಟನೆಗಳು ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಕಳೆದ ಒಂದು ತಿಂಗಳಿಂದ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ನೋಯ್ಡಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ಶಿಯೋರಾಜ್ ಸಿಂಗ್ ಅವರು ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.
"ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳಿ, ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್ಪಿ) ಖಾತರಿ ನೀಡುವಂತಹ ಕಾನೂನು ರೂಪಿಸಿ ಮತ್ತು ಕಿಸಾನ್ ಆಯೋಗ್(ರೈತ ಆಯೋಗ) ರಚಿಸುವಂತೆ" ಪ್ರಧಾನಿ ಮೋದಿಗೆ ರಕ್ತದಲ್ಲಿ ಬರೆದ ಸಂಕ್ಷಿಪ್ತ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಪತ್ರವನ್ನು ನೋಯ್ಡಾ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ. ಅದನ್ನು ಪ್ರಧಾನ ಮಂತ್ರಿಗಳ ಕಚೇರಿಗೆ(ಪಿಎಂಒ) ರವಾನಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಎಂದು ಬಿಕೆಯು(ಲೋಕ ಶಕ್ತಿ) ವಕ್ತಾರ ಶೈಲೇಶ್ ಕುಮಾರ್ ಗಿರಿ ತಿಳಿಸಿದ್ದಾರೆ.
ನಾನು ರೈತ ಸಂಘದಿಂದ ರಕ್ತದಲ್ಲಿ ಬರೆಯಲ್ಪಟ್ಟ ಪತ್ರವನ್ನು ಸ್ವೀಕರಿಸಿದ್ದೇನೆ. ಅದನ್ನು ನಮ್ಮ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಕಚೇರಿಗೆ ಕಳುಹಿಸಲಾಗುವುದು ಎಂದು ನೋಯ್ಡಾ ನಗರ ಮ್ಯಾಜಿಸ್ಟ್ರೇಟ್ ಉಮಾಶಂಕರ್ ಅವರು ಪಿಟಿಐಗೆ ತಿಳಿಸಿದ್ದಾರೆ.
Advertisement