ಕೋಲ್ಕತಾ: 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೇಸರಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುವುದಾಗಿ ಇತ್ತೀಚಿಗಷ್ಟೇ ಬಿಜೆಪಿ ಸೇರ್ಪಡೆಗೊಂಡ ಮಾಜಿ ಸಚಿವ ಸುವೇಂದು ಅಧಿಕಾರಿ ಅವರು ಶನಿವಾರ ಹೇಳಿದ್ದಾರೆ.
ಟಿಎಂಸಿ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿ, ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ರಾಷ್ಟ್ರದ ಸೇವೆಗೆ ಸಮರ್ಪಿತವಾಗಿದೆ. ಆದರೆ ಟಿಎಂಸಿಯಲ್ಲಿ ಯಾವುದೇ ಶಿಸ್ತು ಇಲ್ಲ ಎಂದು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಆದ್ದರಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಪಶ್ಚಿಮ ಬಂಗಾಳವನ್ನು ಸೋನಾರ್ ಬಾಂಗ್ಲಾ(ಗೋಲ್ಡನ್ ಬಂಗಾಳ) ಆಗಿ ಪರಿವರ್ತಿಸುತ್ತೇವೆ. ಪಶ್ಚಿಮ ಬಂಗಾಳವನ್ನು ಸಮರ್ಥ ನಾಯಕ ನರೇಂದ್ರ ಮೋದಿಯವರ ಕೈಗೆ ಒಪ್ಪಿಸಬೇಕಾಗಿದೆ" ಎಂದರು.
"ರಾಜ್ಯದಲ್ಲಿ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ನಾವು ಶಿಸ್ತಿನಿಂದ ಕೆಲಸ ಮಾಡುತ್ತೇವೆ ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ" ಎಂದು ಹೇಳಿದರು.
Advertisement