ಕದಡಿದ ಮತ್ತು ಅತ್ಯಂತ ಅಪಾಯಕಾರಿ ಪರಿಸ್ಥಿತಿ: ನಾಗಾಲ್ಯಾಂಡ್ ನಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಮುಂದುವರಿಕೆ

ಈಶಾನ್ಯಾ ಭಾರತದ ನಾಗಾಲ್ಯಾಂಡ್ ರಾಜ್ಯದಲ್ಲಿ ಈಗಲೂ ಪರಿಸ್ಥಿತಿ ಕದಡಿದಂತಿದ್ದು, ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ ಹೀಗಾಗಿ ಮುಂದಿನ ಆರು ತಿಂಗಳ ಕಾಲ ನಾಗಾಲ್ಯಾಂಡ್ ನಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಈಶಾನ್ಯಾ ಭಾರತದ ನಾಗಾಲ್ಯಾಂಡ್ ರಾಜ್ಯದಲ್ಲಿ ಈಗಲೂ ಪರಿಸ್ಥಿತಿ ಕದಡಿದಂತಿದ್ದು, ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿದೆ ಹೀಗಾಗಿ ಮುಂದಿನ ಆರು ತಿಂಗಳ ಕಾಲ ನಾಗಾಲ್ಯಾಂಡ್ ನಲ್ಲಿ ಎಎಫ್‌ಎಸ್‌ಪಿಎ ಕಾಯ್ದೆ ಮುಂದುವರಿಯಲಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಗೃಹ ಸಚಿವಾಲಯ, 'ಇಡೀ ನಾಗಾಲ್ಯಾಂಡ್ ಅನ್ನು "ತೊಂದರೆಗೊಳಗಾದ ಪ್ರದೇಶ" ಎಂದು ಘೋಷಿಸಿದ್ದು, ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡುವ ವಿವಾದಾತ್ಮಕ ಎಎಫ್‌ಎಸ್‌ಪಿಎ ಕಾಯ್ದೆಯನ್ನು ಮುಂದಿನ ಆರು ತಿಂಗಳ ಕಾಲ ಮುಂದುವರೆಸುವುದಾಗಿ ಘೋಷಣೆ  ಮಾಡಿದೆ. ಈ  ಎಎಫ್‌ಎಸ್‌ಪಿಎ ಕಾಯ್ದೆಯು ಭದ್ರತಾ ಪಡೆಗಳಿಗೆಸ ನಾಗಾಲ್ಯಾಂಡ್ ನಲ್ಲಿ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಕಾರ್ಯಾಚರಣೆ ನಡೆಸುವ ಅಧಿಕಾರ ನೀಡಲಿದ್ದು, ಅಲ್ಲದೆ ಪೂರ್ವ ವಾರಂಟ್ ಸಹ ಇಲ್ಲದೇ ಯಾವುದೇ ವ್ಯಕ್ತಿಯನ್ನು ಬಂಧಿಸುವ ಅಥವಾ ವಿಚಾರಣೆ ನಡೆಸುವ ಅಧಿಕಾರ ನೀಡುತ್ತದೆ.  

ಇನ್ನು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (ಎಎಫ್‌ಎಸ್‌ಪಿಎ) ನಾಗಾಲ್ಯಾಂಡ್‌ನಲ್ಲಿ ಹಲವಾರು ದಶಕಗಳಿಂದ ಜಾರಿಯಲ್ಲಿದ್ದು, ಕೇಂದ್ರ ಗೃಹ ಇಲಾಖೆಯ ಅಭಿಪ್ರಾಯದಂತೆ ಇಡೀ ನಾಗಾಲ್ಯಾಂಡ್ "ತೊಂದರೆಗೀಡಾದ ಮತ್ತು ಅಪಾಯಕಾರಿ ಸ್ಥಿತಿಯಲ್ಲಿದೆ". ರಾಜ್ಯದ ವಿವಿಧ ಭಾಗಗಳಲ್ಲಿ ಹತ್ಯೆಗಳು, ಲೂಟಿ ಮತ್ತು  ಸುಲಿಗೆ ನಡೆಯುತ್ತಿದೆ. ಇಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ರಕ್ಷಣೆಗೆ ಸಶಸ್ತ್ರ ಪಡೆಗಳ ನೆರವು ಅತ್ಯಗತ್ಯ. ಹೀಗಾಗಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958 (1958 ರ ನಂ .28) ರ ಸೆಕ್ಷನ್ 3 ರಡಿಯಲ್ಲಿ ಡಿಸೆಂಬರ್ 30ರಿಂದಲೇ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಕಾಲ ನಾಗಾಲ್ಯಾಂಡ್ ನಲ್ಲಿ  ಎಎಫ್‌ಎಸ್‌ಪಿಎ ಕಾಯ್ದೆ ಮುಂದುವರಿಯಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಶಾನ್ಯ ಭಾರತ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಎಎಫ್‌ಎಸ್‌ಪಿಎ ರದ್ದುಗೊಳಿಸುವಂತೆ ವಿವಿಧ ಸಂಸ್ಥೆಗಳಿಂದ ಬೇಡಿಕೆ ಇರಿಸಿದ್ದು, ಈ ಕಾಯ್ದೆ ಭದ್ರತಾ ಪಡೆಗಳಿಗೆ ಅಗತ್ಯಕ್ಕಿಂತ ಹೆಚ್ಚು ಅಧಿಕಾರ ನೀಡುತ್ತದೆ. ಇದರಿಂದ ಭದ್ರತಾ ಪಡೆಗಳು ಸಾರ್ವಜನಿಕರನ್ನು ಅಮಾಯಕರನ್ನು ಶೋಷಣೆ ಮಾಡಲು ಅಧಿಕಾರ  ನೀಡಿದಂತಾಗುತ್ತದೆ. ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿವೆ. ಈ ಹಿಂದೆ ಅಂದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದೇ ವಿವಾದಿತ ಕಾಯ್ದೆ ವಿಚಾರವಾಗಿ ಆಗಸ್ಟ್ 3, 2015 ರಂದು ನಾಗಾ ದಂಗೆಕೋರರ ಗುಂಪು ಎನ್‌ಎಸ್‌ಸಿಎನ್-ಐಎಂ ಪ್ರಧಾನ ಕಾರ್ಯದರ್ಶಿ  ಥುಂಗಲೆಂಗ್ ಮುಯಿವಾ ಮತ್ತು ಸರ್ಕಾರಿ ಸಂವಾದಕ ಆರ್ ಎನ್ ರವಿ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇದಾಗ್ಯೂ ನಾಗಾಲ್ಯಾಂಡ್ ನಲ್ಲಿ ಎಎಫ್‌ಎಸ್‌ಪಿಎ ಹಿಂಪಡೆಯಲಾಗಿಲ್ಲ.

ಈ ಒಪ್ಪಂದಕ್ಕಾಗಿ ಕಳೆದ 18 ವರ್ಷಗಳಿಂದ ಸರ್ಕಾರ ಮತ್ತು ನಾಗಾಲ್ಯಾಂಡ್ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿತ್ತು. 2015ರಲ್ಲಿ 80 ಸುತ್ತು ಮಾತುಕತೆಗಳ ಬಳಿಕ ಕೇಂದ್ರ ಸರ್ಕಾರ ಈ ಒಪ್ಪಂದಕ್ಕೆ ಮುಂದಾಗಿತ್ತು. 1997 ರಲ್ಲಿ ನಾಗಾಲ್ಯಾಂಡ್‌ನಲ್ಲಿ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿತ್ತು.  ಎನ್ಎಸ್ಸಿಎನ್-ಐಎಂ ನಾಗಾಲ್ಯಾಂಡ್ ಗೆ ಪ್ರತ್ಯೇಕ ಧ್ವಜ ಮತ್ತು ಸಂವಿಧಾನಕ್ಕಾಗಿ ಒತ್ತಾಯಿಸಿ ಹೋರಾಟ ಮಾಡುತ್ತಿದೆ. ಇದು ನಾಗಾಲ್ಯಾಂಡ್ ನಲ್ಲಿ ಅಶಾಂತಿಗೆ ಕಾರಣವಾಗಿತ್ತು.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com